Thursday, May 16, 2024
Homeಅಪರಾಧಕೆಲಸದ ಆಮಿಷ ವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ; ಪ್ರಮುಖ ಆರೋಪಿಗೆ ಜಾಮೀನು

ಕೆಲಸದ ಆಮಿಷ ವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ; ಪ್ರಮುಖ ಆರೋಪಿಗೆ ಜಾಮೀನು

spot_img
- Advertisement -
- Advertisement -

ಪುತ್ತೂರು: ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿ ಯುವತಿಯೋರ್ವಳನ್ನು ಕೆಲಸದ ಆಮಿಷ ವೊಡ್ಡಿ ಕರೆಯಿಸಿ ಕೊಂಡು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಹರ್ಷಿತ್‌ ಎಂಬಾತನಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ಮಾ. 13ರಂದು ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ನಾಲ್ವರನ್ನು ಬಂಧಿಸಿದ್ದರು.

ಘಟನೆಯ ವಿವರ;  ಮಂಗಳೂರಿನ ವಾಮಂಜೂರು ಮೂಲದ ಯುವತಿ ಮತ್ತು ಪುತ್ತೂರಿನ ಯುವಕ ಇನ್‌ಸ್ಟಾಗ್ರಾಮ್‌ ಮೂಲಕ ಸಂಪರ್ಕ ಹೊಂದಿದ್ದು, ಯುವತಿಯ ಕೋರಿಕೆಯಂತೆ ಯುವಕ ಪುತ್ತೂರಿ ಲ್ಲಿ ಆಕೆಗೆ ಉದ್ಯೋಗಕ್ಕಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದ. ಯುವಕನ ಸ್ನೇಹಿತರಿಬ್ಬರು ಇದನ್ನು ದುರುಪ ಯೋಗಪಡಿಸಿಕೊಂಡು ವಾಮಂಜೂರಿನ ಯುವತಿಯ ನಂಬರ್‌ ಪಡೆದು ಉದ್ಯೋಗ ಕೊಡಿಸುವುದಾಗಿ ಪುತ್ತೂರಿಗೆ ಕರೆಯಿಸಿ ಕೊಂಡಿದ್ದರು. ಯುವತಿಯು ತನ್ನ ಸ್ನೇಹಿತೆಯ ಜತೆಗೆ ಮಾ. 13ರಂದು ಪುತ್ತೂರಿಗೆ ಬಂದಾಗ ಆರೋಪಿ ಯುವಕರಿಬ್ಬರು ಪ್ರೊಫೈಲ್‌ ಬರೆಯಲೆಂದು ಹೇಳಿ ಅವರನ್ನು ಬನ್ನೂರು ಗ್ರಾಮದ ಬನ್ನೂರುಬೈಲು ಬಳಿಯ ನಿರ್ಜನ ಮನೆಯೊಂದಕ್ಕೆ ಕರೆದೊಯ್ದಿದ್ದರು.

ಅಲ್ಲಿ ಓರ್ವ ಯುವತಿಯನ್ನು ಹೊರಗೆ ಕುಳ್ಳಿರಿಸಿ ಇನ್ನೋರ್ವ ಯುವತಿಯನ್ನು ಮನೆಗೆ ಕರೆದೊಯ್ದು ಅಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಘಟನೆಯ ಬಳಿಕ ಆರೋಪಿ ಯುವಕರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದು, ಸಂತ್ರಸ್ತೆ ಯುವತಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಪುತ್ತೂರು ಮಹಿಳಾ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.

ದೂರು ಸ್ವೀಕರಿಸಿದ ಪೊಲೀಸರು ಆರಂಭದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಆರೋಪಿಗಳಿಗೆ ಬಾಡಿಗೆ ಮನೆ ನೀಡಿ ಆಶ್ರಯ ನೀಡಿದ್ದ ಇನ್ನಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಮನು ಯಾನೆ ಮನ್ವಿತ್‌ಗೆ ಆರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈಗ ಮತ್ತೋರ್ವ ಪ್ರಮುಖ ಆರೋಪಿ ಹರ್ಷಿತ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

- Advertisement -
spot_img

Latest News

error: Content is protected !!