Saturday, June 6, 2026
Homeಕರಾವಳಿಕೋವಿಡ್ ಮಾರ್ಗಸೂಚಿಗಳೊಂದಿಗೆ ಅ. 7ರಿಂದ ಅ.16ರವರೆಗೆ ಮಂಗಳೂರು ದಸರ; 'ನಮ್ಮ ದಸರಾ- ನಮ್ಮ ಸುರಕ್ಷೆ' ಘೋಷ...

ಕೋವಿಡ್ ಮಾರ್ಗಸೂಚಿಗಳೊಂದಿಗೆ ಅ. 7ರಿಂದ ಅ.16ರವರೆಗೆ ಮಂಗಳೂರು ದಸರ; ‘ನಮ್ಮ ದಸರಾ- ನಮ್ಮ ಸುರಕ್ಷೆ’ ಘೋಷ ವಾಕ್ಯದಡಿ ಆಚರಣೆ!

- Advertisement -
- Advertisement -

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ ಈ ಬಾರಿಯೂ ಕಳೆದ ಬಾರಿಯಂತೆ ಕೋವಿಡ್ ಮಾರ್ಗಸೂಚಿಗಳೊಂದಿಗೆ ಅ. 7ರಿಂದ ಅ.16ರವರೆಗೆ “ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷ ವಾಕ್ಯದಡಿ ನಡೆಯಲಿದೆ.

ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿಯವರ ಮಾರ್ಗದರ್ಶದಂತೆ, ಈ ಬಾರಿಯ ದಸರಾ ಕಾರ್ಯಕ್ರಮ ನಡೆಯಲಿದ್ದು, ಶಾರದಾ ಮೂರ್ತಿಯ ವಿಸರ್ಜನೆಯ ದಿನದಂದು ದಸರಾ ಮೆರವಣಿಗೆ ಹೊರತುಪಡಿಸಿ ಉಳಿದೆಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಸರಕಾರದ ಮಾರ್ಗಸೂಚಿ ಪ್ರಕಾರ ನಡೆಸುವಂತೆ ಜಿಲ್ಲಾಧಿಕಾರಿಗಳು ಕ್ಷೇತ್ರಾಡಳಿತ ಮಂಡಳಿಗೆ ಸಲಹೆ ನೀಡಿದ್ದು, ಅಂತೆಯೇ ಆಚರಿಸಲಾಗುವುದು ಎಂದು ತಿಳಿಸಿದರು.

ಶಾರದಾ ಮೂರ್ತಿ ವಿಸರ್ಜನೆ ಯಂದು ಮೆರವಣಿಗೆ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಯಥಾವತ್ತಾಗಿ ನೆರವೇರಲಿವೆ. ಅನ್ನ ಸಂತರ್ಪಣೆ ಅಂಗವಾಗಿ ಕಳೆದ ಬಾರಿಯಂತೆ ಪ್ರಸಾದ ರೂಪದಲ್ಲಿ ಅನ್ನ ವಿತರಣೆ ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2.30ರ ತನಕ ಇರಲಿದೆ ಎಂದು ತಿಳಿಸಿದರು.

ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಳೀಯ ಟಿವಿ ಚಾನೆಲ್‌ಗ‌ಳ ಮೂಲಕ ನೇರ ಪ್ರಸಾರಕ್ಕೆ ಮಾಡಲಾಗುತ್ತದೆ ಎಂದು ಕೋಶಾಧಿಕಾರಿ ಪದ್ಮರಾಜ್‌ ಆರ್‌. ತಿಳಿಸಿದರು.

ಮನಪಾ ವತಿಯಿಂದ ರಾಜಬೀದಿ ಅಲಂಕಾರ ಈ ವರ್ಷದಿಂದ ಮಂಗಳೂರು ದಸರಾ ಸಂದರ್ಭ ರಾಜಬೀದಿ ಅಲಂಕಾರದ ಸಂಪೂರ್ಣ ಜವಾಬ್ದಾರಿ ಯನ್ನು ಮಹಾ ನಗರಪಾಲಿಕೆ ವಹಿಸಿ ಕೊಂಡಿದೆ. ಶಾಸಕ ಡಿ. ವೇದವ್ಯಾಸ ಕಾಮತ್‌ 2020ರ ದಸರಾ ಮಹೋತ್ಸವ ಸಂದರ್ಭ ನೀಡಿದ ಭರವಸೆಯಂತೆ ಈ ವ್ಯವಸ್ಥೆ ಮಾಡಿಸಿದ್ದಾರೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯ ಹರಿಕೃಷ್ಣ ಬಂಟ್ವಾಳ ತಿಳಿಸಿದರು.

ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷೆ ಉರ್ಮಿಳಾ ರಮೇಶ್‌, ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ಕೆ. ಮಹೇಶ್ಚಂದ್ರ, ಎಂ. ಶೇಕರ್‌ ಪೂಜಾರಿ, ಜಗದೀಪ್‌ ಡಿ. ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ| ಬಿ.ಜಿ. ಸುವರ್ಣ, ಸದಸ್ಯರಾದ ರಾಧಾಕೃಷ್ಣ, ಜತಿನ್‌ ಅತ್ತಾವರ, ಲೀಲಾಕ್ಷ ಕರ್ಕೇರ, ಚಂದನ್‌ದಾಸ್‌, ಗೌರವಿ ಪಿ.ಕೆ., ಕಿಶೋರ್‌ ದಂಡಕೇರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಅ. 7ರಂದು ಮಹಾನವಮಿ ಉತ್ಸವ ಆರಂಭವಾಗಲಿದ್ದು, ಪೂರ್ವಾಹ್ನ 11.40ಕ್ಕೆ ನವದುರ್ಗೆಯರು ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ನಿತ್ಯವೂ ವಿಶೇಷ ಪೂಜೆ, ಹೋಮಗಳು ನಡೆಯಲಿವೆ. ಅ. 15ರಂದು ಸಂಜೆ ಮಹಾ ಪೂಜೆ, ಉತ್ಸವ, ರಾತ್ರಿ 8ಕ್ಕೆ ಪುಷ್ಕರಿಣಿಯಲ್ಲಿ ಪೂಜೆ ಬಲಿ ಇತ್ಯಾದಿ ವಿಧಿಯ ಬಳಿಕ ಶಾರದಾ ವಿಸರ್ಜನೆ, ಅವಭೃಥ ಸ್ನಾನ, ಅ. 16ರಂದು ರಾತ್ರಿ 7ಕ್ಕೆ ಭಜನೆ, 7.30ರಿಂದ ಗುರು ಪೂಜೆ ನಡೆಯಲಿದೆ.

ಕ್ಷೇತ್ರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಮಾಸ್ಕ್ ಧಾರಣೆ ಸಹಿತ ಕೊರೊನಾ ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕು. ಇಲ್ಲವಾದರೆ ಪ್ರವೇಶ ನಿಷೇಧಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

- Advertisement -

Latest News

error: Content is protected !!