ಬಂಟ್ವಾಳ; ಮಾಣಿಗುತ್ತಿನಲ್ಲಿ ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿಯ ಜೀರ್ಣೋದ್ಧಾರದ ಸಲುವಾಗಿ ಸಮಾಲೋಚನಾ ಸಭೆಯು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಮಾಣಿಶ್ರೀ ಸಭಾಂಗಣದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಾಣಿಗುತ್ತು ಸಚಿನ್ ರೈಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಅರೆಬೆಟ್ಟು ನುಳಿಯಾಲುಗುತ್ತು ಸಂತೋಷ್ ಕುಮಾರ್ ಶೆಟ್ಟಿಯವರು, ಜೀರ್ಣೋದ್ದಾರದ ಸಲುವಾಗಿ ಗ್ರಾಮಸ್ಥರ ಮತ್ತು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳ ಮತ್ತು ಸದಸ್ಯರ ಕಾರ್ಯ ಶ್ಲಾಘನೀಯ. ಬೈಲುವಾರು ಸಮಿತಿಯ ಸಂಚಾಲಕರು ಮತ್ತು ಸದಸ್ಯರು ಮನೆಮನೆ ಭೇಟಿ ಮಾಡಿರುವುದು ಗ್ರಾಮದಲ್ಲಿ ಆಂದೋಲನವನ್ನು ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ಜೀರ್ಣೋದ್ದಾರದ ಪ್ರಕ್ರಿಯೆ ಇನ್ನಷ್ಟು ವೇಗವನ್ನು ಪಡೆಯಲು ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ, ಸಂಚಾಲಕ ಜಗನ್ನಾಥ ಚೌಟ ಬದಿಗುಡ್ಡೆ, ಉಪಾಧ್ಯಕ್ಷ ರಾಮಚಂದ್ರ ಪೂಜಾರಿ ಪಾದೆ, ಪ್ರಮುಖರಾದ ಸುಧೀರ್ ಕುಮಾರ್ ಶೆಟ್ಟಿ ಬನ್ನೂರುಗುತ್ತು, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿದರು.