ಸುಳ್ಯ; ಅರಂಬೂರಿನಲ್ಲಿ ಪತ್ತೆಯಾದ ಅಪರಿಚಿತ ಶವದ ಗುರುತು ಪತ್ತೆಯಾಗಿದೆ. ಮಡಿಕೇರಿ ತಾಲೂಕು ಎಂ ಚೆಂಬು ಗ್ರಾಮದ ಬಾಲಕೃಷ್ಣ (65) ಅವರ ಮೃತದೇಹ ಅನ್ನೋದನ್ನು ಕುಟುಂಬಸ್ಥರು ಗುರುತಿಸಿದ್ದಾರೆ.
ಮಿನುಂಗೂರು ಮನೆಯ ಬಾಲಕೃಷ್ಣ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆಗಸ್ಟ್ 8ರಂದು ಚೆಂಬುವಿನಲ್ಲಿರುವ ತನ್ನ ಮನೆಯಿಂದ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಅರಂತೋಡಿಗೆ ತೆರಳಿದ್ದರು. ಹಾಗೆ ಬಂದವರು ಅರಂತೋಡಿನಿಂದ ವ್ಯಾನ್ ಹತ್ತಿ ಸುಳ್ಯಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಮರಳಿ ವಾಪಸ್ ಮನೆಗೆ ಬಂದಿರಲಿಲ್ಲ. ಎಲ್ಲಿ ಹೋದರು ಏನು ಆದರು ಅನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ಈ ಕುರಿತಂತೆ ಮನೆಯವರು ತೀವ್ರ ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ನಿನ್ನೆ ಘಟನೆ ನಡೆದು ಆರು ದಿನಗಳ ನಂತರ ಅರಂಬೂರಿನ ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು . ಅದರಂತೆ ಈ ಶವ ಬಾಲಕೃಷ್ಣ ಅವರದ್ದು ಆಗಿರಬಹುದು ಎಂದು ಮನೆಯವರನ್ನು ಕರೆಸಿ ಪರಿಶೀಲನೆ ನಡೆಸಿದಾಗ ಬಾಲಕೃಷ್ಣ ಅವರದ್ದು ಎಂದು ಖಚಿತಪಡಿಸಿದ್ದಾರೆ. ಬಾಲಕೃಷ್ಣ ಅವರು ಪುತ್ರ, ಪುತ್ರಿ ಹಾಗೂ ಪತ್ನಿ ಕುಟುಂಬಸ್ಥರನ್ನು ಅಗಲಿದ್ದಾರೆ.ಅನಾರೋಗ್ಯದಿಂದ ಚಿಂತೆಗೀಡಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.