ಉಡುಪಿ : ನಿಮ್ಮ ಮನೆಗೆ ಮಾಟ ಮಾಡಿಸಿದ್ದಾರೆ. ನಾನು ಅದನ್ನು ತೆಗಿಸುತ್ತೇನೆ ಎಂದು ಹೇಳಿ ಅಪರಿಚಿತ ಮಹಿಳೆಯೊಬ್ಬಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗಿರುವ ಘಟನೆ ಉಡುಪಿಯ ನಿಟ್ಟೂರು ರಾಜೀವನಗರ ಎಂಬಲ್ಲಿ ನಡೆದಿದೆ.
ತಾನು ಜ್ಯೋತಿಷಿ ಎಂದು ಮನೆಯೊಂದಕ್ಕೆ ಬಂದ ಅಪರಿಚಿತ ಮಹಿಳೆ ಮನೆಯಾಕೆಯನ್ನು ನಂಬಿಸಿದ್ದಾಳೆ. ‘ನಿಮ್ಮ ಮನೆಯಲ್ಲಿ ಯಾರೊ ಮಾಟ ಮಂತ್ರ ಮಾಡಿದ್ದಾರೆ, ಕಣ್ಣು ದೃಷ್ಟಿ ಆಗಿದೆ, ಲಕ್ಷ್ಮಿ ಪೂಜೆ ಮಾಡಿಸುತ್ತೇನೆ’ ಎಂದು ಹೇಳಿದ ಆಕೆ, ಪೂಜೆಗಾಗಿ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ತರುವಂತೆ ತಿಳಿಸಿದ್ದಳು.
ಅದರಂತೆ ಮನೆ ಮಾಲಕಿ ಲಕ್ಷ್ಮಿ ಎಲ್ಲಾ ಚಿನ್ನಾಭರಣಗಳನ್ನು ಮತ್ತು 15,000 ರೂ. ಹಣವನ್ನು ಬಾಕ್ಸ್ ನಲ್ಲಿ ಹಾಕಿ ಕೊಟ್ಟಿದ್ದರು. ಅಪರಿಚಿತ ಮಹಿಳೆ, ಪೂಜೆ ಮುಗಿಸಿ ಬಾಕ್ಸ್ ವಾಪಾಸು ಕೊಟ್ಟು ಅಲ್ಲಿಂದ ಹೋಗಿದ್ದಾಳೆ. ನಂತರ ಲಕ್ಷ್ಮಿ ಬಾಕ್ಸ್ ತೆಗೆದು ನೋಡುವಾಗ ಚಿನ್ನಾಭರಣಗಳು ಮತ್ತು ನಗದು ಹಣ ಇಲ್ಲದಿರುವುದು ಕಂಡು ಬಂದಿದೆ.
ಅಪರಿಚಿತ ಮಹಿಳೆ ಅಂದಾಜು ಮೌಲ್ಯ 7.36 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ 15 ಸಾವಿರ ರೂ. ನಗದನ್ನು ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.