ಬೆಂಗಳೂರು: ಕೆಲ ಸಚಿವರುಗಳು ರಾಸಲೀಲೆ ಸಿಡಿಯ ವಿಷವರ್ತುಲದಲ್ಲಿ ಸಿಲುಕುವ ಆತಂಕದಿಂದ ತಮ್ಮ ವಿರುದ್ಧ ಯಾವುದೇ ಮಾಧ್ಯಮಗಳು ಯಾವುದೇ ರೀತಿಯ ಸುದ್ದಿ ಪ್ರಸಾರ ಮಾಡದಂತೆ ಮುಂಜಾಗ್ರತೆಯಾಗಿ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ ಸಿಡಿ ಇದೆ ಎಂದು ಗೊತ್ತಿದ್ದರೆ ಮಾತ್ರ ಅದರಿಂದ ನುಣುಚಿಕೊಳ್ಳಲು ಇದೊಂದು ರಾಜಕೀಯ ಷಡ್ಯಂತ್ರ ಎಂದು ಹೇಳಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ಕೆಲದಿನಗಳಿಂದ ಸಚಿವ ಡಾ.ಸುಧಾಕರ್ ಮತ್ತು ಕನ್ನಡದ ಖ್ಯಾತ ನಟಿಯೊಬ್ಬರ ರಾಸಲೀಲೆ ಸಿಡಿ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂಬ ವದಂತಿಗೆ ಬೆಂಗಳೂರಿನಲ್ಲಿ ಮಾಧ್ಯಮದವರ ಮುಂದೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಹಾಗಾದರೆ ಸಚಿವ ಡಾ. ಸುಧಾಕರ್ ಅವರದ್ದು ರಾಸಲೀಲೆಯ ಸಿಡಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಬಗ್ಗೆಯಾಗಲಿ ಅಥವಾ ಬೇರೆ ಯಾವ ಸಚಿವರ ಬಗ್ಗೆಯಾಗಲೀ ನನಗೆ ಅನುಕಂಪ ಇಲ್ಲ. ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ಕಳ್ಳರೇ. ಕೆಲವರು ಮಾಡುವ ತಪ್ಪುಗಳಿಂದ ಎಲ್ಲ ಜನಪ್ರತಿನಿಧಿಗಳಿಗೆ ಜನರು ಶಾಪ ಹಾಕುತ್ತಿದ್ದಾರೆ. ರಾಜಕಾರಣಿಗಳು ಎಂದರೆ ಲಫಂಗರು ಎನ್ನುವ ರೀತಿ ಆಗಿದೆ. ಸಮಾಜಕ್ಕೆ ರಾಜಕಾರಣಿಗಳ ಬಗ್ಗೆ ತಪ್ಪು ಗ್ರಹಿಕೆ ರವಾನೆಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.