ಲಡಾಖ್: ಲಡಾಖ್ನ ತುರ್ತುಕ್ ಸೆಕ್ಟರ್ನ ಶೋಕ್ ನದಿಗೆ 26 ಭಾರತೀಯ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಉರುಳಿ ಬಿದ್ದು 7 ಯೋಧರು ಹುತಾತ್ಮರಾಗಿರುವ ದುರ್ಘಟನೆ ಸಂಭವಿಸಿದೆ.
ಸಿಯಾಚಿನ್ನ ನೈಋತ್ಯ ಭಾಗದ ಲೇಹ್ ಜಿಲ್ಲೆಯ ತುರ್ತುಕ್ ಸೆಕ್ಟರ್ನಲ್ಲಿ ಈ ಘಟನೆ ನಡೆದಿದ್ದು, ಸೈನಿಕರು ಪ್ರಯಾಣಿಸುತ್ತಿದ್ದ ಬಸ್ ಸ್ಕಿಡ್ ಆಗಿ 7 ಮಂದಿ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ನೀಡಲು ಎಲ್ಲ ಪ್ರಯತ್ನ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯೋಧರನ್ನು ಸ್ಥಳಾಂತರಿಸಲು ಭಾರತೀಯ ವಾಯುಪಡೆಯಿಂದ ಸಹಾಯವನ್ನು ಕೋರಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ಅಧಿಕಾರಿಗಳು, ಸೈನಿಕರು ಪರ್ತಾಪುರ್ ಟ್ರಾನ್ಸಿಟ್ ಕ್ಯಾಂಪ್ನಿಂದ ತುರ್ತುಕ್ನ ಮುಂದಿನ ಪ್ರದೇಶಕ್ಕೆ ಹೋಗುತ್ತಿದ್ದರು. ಬೆಳಿಗ್ಗೆ 9 ಗಂಟೆಯ ಸುಮಾರಿಗೆ, ಥೋಯಿಸ್ನಿಂದ ಸುಮಾರು 25 ಕಿಮೀ ದೂರದಲ್ಲಿ ಬಸ್ ಸುಮಾರು 50 ರಿಂದ 60 ಅಡಿಗಳಷ್ಟು ಶ್ಯಕ್ ನದಿಗೆ ಬಿದ್ದು, ಬಸ್ಸಿನಲ್ಲಿದ್ದ ಎಲ್ಲಾ ಯೋಧರಿಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.