ಸುಳ್ಯ: ನಮ್ಮ ವಿದ್ಯಾ ಸಂಸ್ಥೆಯ ಮೇಲೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪದಾಧಿಕಾರಿಗಳು ದಾಳಿ, ದಬ್ಬಾಳಿಕೆ ನಡೆಸಿದ್ದಾರೆ ಎಂದು ಡಾ. ಕೆ.ವಿ ರೇಣುಕಾ ಪ್ರಸಾದ್ ಅವರ ಪತ್ನಿ ಜ್ಯೋತಿ ಆರ್ ಪ್ರಸಾದ್ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಶುಕ್ರವಾರದಂದು ತುರ್ತು ಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಳಿಯಿಂದ ವಿದ್ಯಾಸಂಸ್ಥೆಯ ಸಿಬ್ಬಂದಿಗೆ ಭಯ ಹಾಗೂ ಆತಂಕ ಉಂಟಾಗಿದೆ. ನನ್ನ ಯಜಮಾನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನೋವು ಹಾಗೂ ಸಂಕಟದ ಸಮಯದಲ್ಲಿ ನಾವಿದ್ದೇವೆ ಎಂದು ತಿಳಿಸಿದರು.
ಇನ್ನು ಇಂತಹ ಸಮಯದಲ್ಲಿಯೂ ಏಕಾಏಕಿ ಪ್ರಾಂಶುಪಾಲರ ಕಚೇರಿಗೆ ಬಂದು ಇನ್ನು ನಾವೇ ಕಾಲೇಜು ನಡೆಸುವುತ್ತೇವೆ ಎಂದಿದ್ದಾರೆ ಎಂದು ಆರೋಪಿಸಿದರು.
ನನ್ನ ಯಜಮಾನರು 2009ರಿಂದ ಈ ಸಂಸ್ಥೆಗಳನ್ನು ನೋಡಿಕೊಂಡು ಬರುತ್ತಿದ್ದು, ಹಿಂದೊಮ್ಮೆ ನಾನೇ ನೋಡಿಕೊಳ್ಳುತ್ತಿದ್ದೆ. ಅವರ ಅನುಪ ಸ್ಥಿತಿಯಲ್ಲಿ ಈಗಲೂ ನಾನೇ ನೋಡಿಕೊಳ್ಳುತ್ತಿದ್ದು, ಸಂಸ್ಥೆಯ ಹಿತ ಕಾಪಾಡಿಕೊಳ್ಳುತ್ತಿದ್ದೇನೆ. ಸಂಸ್ಥೆಯ ನಿರ್ದೇಶನಕ್ಕೆ ಸಂಬಂಧಿಸಿದ ವಿಚಾರ ನ್ಯಾಯಾಲಯದಲ್ಲಿದೆ. ನನ್ನ ಮಗಳು ಮತ್ತು ನಾನು ಅಕಾಡೆಮಿಯ ನಿರ್ದೇಶಕರೇ, ನನ್ನ ಯಜಮಾನರ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು ಅಲ್ಲಿ ನ್ಯಾಯ ಸಿಗುವ ಭರವಸೆಯಿದೆ ಎಂದರು.
ಈ ಸಂದರ್ಭದಲ್ಲಿ ಅಭಿಜ್ಞಾ ಪ್ರಸಾದ್, ಡಾ.ಕೆ.ವಿ ರೇಣುಕಾಪ್ರಸಾದ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು. ಈ ಕುರಿತು ಡಾ. ಜ್ಯೋತಿ ಪ್ರಸಾದ್ ಸುಳ್ಯ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.