ಬೆಂಗಳೂರು: ಐಎಎಸ್ ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನ್ ಸಭೆಗೆ ಆಗಮಿಸಿದ ಗಣ್ಯರ ಸ್ವಾಗತಕ್ಕೆ ನಿಯೋಜಿಸಿದ ವಿಚಾರ ಇಂದು ವಿಧಾನಸಭೆಯಲ್ಲಿ ಹೈಡ್ರಾಮಾ ಸೃಷ್ಟಿಸಿದೆ.
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ಬಿಜೆಪಿ ಸದಸ್ಯರು ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆದರೆ ಸರ್ಕಾರ ಸಮರ್ಥನೆ ಮಾಡಿಕೊಂಡಾಗ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿ ಗದ್ದಲ ಎಬ್ಬಿಸಿದರು.
ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಸದನವನ್ನು ಮುಂದೂಡಿ ಸಂಧಾನ ಸಭೆ ನಡೆಸಿದರೂ ಸಫಲವಾಗಲಿಲ್ಲ. ಮತ್ತೆ ಕಲಾಪ ಆರಂಭವಾದಾಗಲೂ ಬಿಜೆಪಿ ಧರಣಿ ಮುಂದುವರಿಯಿತಲ್ಲದೇ, ಜೆಡಿಎಸ್ ಕೂಡಾ ಧರಣಿಗೆ ಕೈ ಜೋಡಿಸಿತ್ತು.
ಈ ಮಧ್ಯೆ ಸ್ಪೀಕರ್ ಭೋಜನ ವಿರಾಮ ನೀಡದೇ ಕಲಾಪ ಮುಂದುವರಿಸಿ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ನೀಡಿದರು. ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಬಿಜೆಪಿ ಧರಣಿ ಮಧ್ಯೆಯೇ ಚರ್ಚೆ ಮುಂದುವರಿಸಿದಾಗ ಸಿಟ್ಟಿಗೆದ್ದ ವಿಪಕ್ಷ ಬಿಜೆಪಿ ಸದಸ್ಯರು ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಪೀಠದ ಮೇಲೆ ಎಸೆದರು. ಒಂದು ಹಂತದಲ್ಲಿ ಸ್ಪೀಕರ್ ಪೀಠದಲ್ಲಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಮೇಲೆಯೇ ಕಾಗದಗಳನ್ನು ಹರಿದು ಎಸೆದಾಗ ಮಾರ್ಷಲ್ ಗಳು ಬಂದು ರಕ್ಷಣೆ ನೀಡಬೇಕಾಯಿತು.ಕೊನೆಗೆ ಸ್ಪೀಕರ್ ಪೀಠದಲ್ಲಿದ್ದ ಡೆಪ್ಯುಟಿ ಸ್ಪೀಕರ್ ಸದನವನ್ನು ಮುಂದೂಡಿದರು.