ಕಾರವಾರ: ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಕಾಡಿಗೆ ಕರೆದೊಯ್ದು ಗುಂಡು ಹೊಡೆದ ಪತಿಯನ್ನು ಕಾರವಾರದ ಕದ್ರಾ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗೋಯರ ಗ್ರಾಮದ ರಮೇಶ ದೇಸಾಯಿ ಬಂಧಿತ ಆರೋಪಿ. ಆತನ ಪತ್ನಿ ರಸಿಕಾ ತೀವ್ರವಾಗಿ ಗಾಯಗೊಂಡಿದ್ದು, ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ರಮೇಶ್ ದೇಸಾಯಿ ಹಾಗೂ ಆತನ ಪತ್ನಿಯ ಮಧ್ಯೆ ಸದಾ ಜಗಳವಾಗುತ್ತಿತ್ತು. ಇದರಿಂದ ಡಿ.4 ರಂದು ಕಾಡಿಗೆ ಕರೆದೊಯ್ದು, ಕಾಡು ಪ್ರಾಣಿ ಹೊಡೆಯಲು ಇರುವ ನಾಡಕೋವಿಯಿಂದ ಗುಂಡು ಹಾರಿಸಿದ್ದಾನೆ. ಇದರಿಂದ ಪತ್ನಿಯ ಭುಜ ಹಾಗೂ ಕಿಬ್ಬೊಟ್ಟೆಗೆ ಗಾಯವಾಗಿತ್ತು. ಬಳಿಕ ಆತನೇ, ಆಕೆಯನ್ನು ತಂದು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾನೆ. ಬಳಿಕ ಕಟ್ಟಿಗೆ ತರಲು ಕಾಡಿಗೆ ಹೋದಾಗ ಅಪರಿಚಿತ ಬೇಟೆಗಾರರು ಗುಂಡು ಹಾರಿಸಿ ಗಾಯವಾಯಿತು ಎಂದು ಹೇಳಿದ್ದಾನೆ. ಕದ್ರಾ ಪೊಲೀಸ್ ಠಾಣೆಯಲ್ಲೂ ಇದೇ ರೀತಿ ದೂರು ನೀಡಿದ್ದ.
ಅನುಮಾನಗೊಂಡ ಪೊಲೀಸರು ಗಾಯಾಳು ರಸಿಕಾಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆಕೆ ನಡೆದ ಘಟನೆ ಬಾಯ್ಬಿಟ್ಟಿದ್ದಾಳೆ. ಪೊಲೀಸರು ರಮೇಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.