ಬೆಂಗಳೂರು: ಶಾಸಕ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣದ ವೇಳೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಹೋಮ ಕಾರ್ಯದ ನೇತೃತ್ವವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುರೋಹಿತರು ವಹಿಸಿದ್ದರು.
ಸುರತ್ಕಲ್ ನ ಖ್ಯಾತ ಜ್ಯೋತಿಷಿ ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ನೇತೃತ್ವದಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ ಹೋಮ ಕಾರ್ಯ ನಡೆಸಲಾಗಿದೆ.
ನಾಗೇಂದ್ರ ಭಾರದ್ವಾಜ್ ಅವರ ನೇತೃತ್ವದಲ್ಲಿ ವಾಸ್ತು ಪೂಜೆ, ಗಣ ಹೋಮ, ದುರ್ಗಾ ಹೋಮ, ಸುದರ್ಶನ ಹೋಮ ಮತ್ತು ತ್ರೈಲೋಕ್ಯ ಸುಂದರಿ ಹೋಮ ನಡೆಸಲಾಗಿದೆ.
ಹೋಮದ ಪೂರ್ಣಾಹುತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ನಿಕಟಪೂರ್ವ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಗವಹಿಸಿದ್ದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉಸ್ತುವಾರಿಯಲ್ಲಿ ಹೋಮ ಮತ್ತು ಪೂಜಾ ಕಾರ್ಯ ನಡೆದಿದ್ದು, ಹೋಮದ ಸಂಕಲ್ಪದಿಂದ ಹಿಡಿದು ಪೂರ್ಣಾಹುತಿಯವರೆಗೆ ಪೂಂಜ ಪಾಲ್ಗೊಂಡಿದ್ದರು.