ಧಾರವಾಡ : ಹಿಂದೂ ಧರ್ಮದಲ್ಲಿ ಮಕ್ಕಳ ಮುಡಿ ತೆಗೆಯುವ ಸಂಪ್ರದಾಯ ಸರ್ವೇ ಸಾಮಾನ್ಯ.ಆದರೆ ಧಾರವಾಡದಲ್ಲಿ ಮುಸ್ಲೀಂ ಸಮುದಾಯದ ಕುಟುಂಬವೊಂದು ಹಿಂದೂ ಸಂಪ್ರದಾಯದಂತೆ ಮಗುವಿನ ಮುಡಿ ತೆಗೆದು ವಿಶಿಷ್ಟತೆ ಮೆರೆದಿದೆ.
ಅಂದ್ಹಾಗೆ ಇಂತಹದ್ದೊಂದು ಸಾಮರಸ್ಯದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಚಿಕ್ಕನರ್ತಿ ಗ್ರಾಮ. ಚಿಕ್ಕನರ್ತಿ ಗ್ರಾಮದ ಲಾಲಸಾಬ್ ನದಾಫ್ ಹಾಗೂ ಅಮೀನಾ ನದಾಫ್ ದಂಪತಿ ತಮ್ಮ ಮಗನಿಗೆ ಮುಡಿ ತೆಗೆಯುವ ಸಂಪ್ರದಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆರು ತಿಂಗಳ ಮಗು ಆರೀಫ್ಗೆ ಜವಳ ತೆಗೆಸುವ ಕಾರ್ಯಕ್ರಮವನ್ನು ಮಸೀದಿಯಲ್ಲಿ ಮಾಡಿದ್ದಾರೆ. ಹಿಂದೂ- ಮುಸ್ಲಿಂ ಭಾವೈಕ್ಯತೆಯೊಂದಿಗೆ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿದೆ.
ಮಕ್ಕಳಿಗೆ ಬಾಲ್ಯದಿಂದಲೇ ಸಹಬಾಳ್ವೆಯ ಪಾಠ ಹೇಳಿಕೊಡಬೇಕು ಎನ್ನುವುದು ನದಾಫ್ ದಂಪತಿಯ ಇಚ್ಛೆ. ಹಿಂದೂ ಹಾಗೂ ಮುಸ್ಲೀಂರು ಸದಾ ಸಹಬಾಳ್ವೆಯಿಂದ ಬದುಕಬೇಕು. ಒಬ್ಬರಿಗೊಬ್ಬರು ಸದಾ ಜೊತೆಯಾಗಬೇಕು ಎಂಬ ಸಂದೇಶ ನೀಡೋದಕ್ಕಾಗಿ ಈ ದಂಪತಿ ಇಂತಹದ್ದೊಂದು ಕೆಲಸ ಮಾಡಿದ್ದಾರೆ.