ಹಿಂದು ಯುವಕನೊಬ್ಬ ಮುಸ್ಲಿಂ ವಿದ್ಯಾರ್ಥಿಯೊಬ್ಬರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು, ಆ ಮೂಲಕ ಕೊಡಗಿನ ಕುಲದೇವತೆ ಕಾವೇರಮ್ಮ ಮತ್ತು ಕೊಡವ ಹೆಣ್ಣು ಮಕ್ಕಳನ್ನು ಅವಮಾನಿಸಿ ಪೋಸ್ಟ್ ಹಾಕಿದ್ದ ಘಟನೆ ನಡೆದಿದ್ದು, ಕಿಡಿಗೇಡಿ ಹಿಂದು ಯುವಕನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮದ ಯುವಕ ಕೆ.ಸಿ ದಿವಿನ್ ದೇವಯ್ಯ (29)ಎಂದು ತಿಳಿದುಬಂದಿದೆ. ಈತ ಜುಲೈ 3 ರಂದು ಸಿದ್ದಾಪುರದ ಮೊಹಮದ್ ಅಷ್ಫಾಕ್ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ತೆರೆದು ಹಿಂದು ದೇವತೆಗಳನ್ನು ನಿಂಧಿಸಿದ್ದಾನೆ.
ಅಷ್ಫಾಕ್ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೊಡವ ಜನಾಂಗದ ಮಹಿಳೆಯರು ಹಾಗೂ ಕುಲದೇವಿ ಕಾವೇರಮ್ಮನ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ. ಈ ಮೂಲಕ ಕೋಮುದ್ವೇಷ ಬಿತ್ತಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಆಕ್ಷೇಪಾರ್ಹ ಪೋಸ್ಟ್ ವಿರುದ್ಧ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮುಸ್ಲಿಂ ಯುವಕ ಪೋಸ್ಟ್ ಹಾಕಿದ್ದಾನೆ. ಆತನನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು ನಡೆದಿದ್ದವು. ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದ ಮೇಲೆ ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇನ್ನು ಆರೋಪಿಯನ್ನು ಪತ್ತೆ ಹಚ್ಚಲು ಮುಂದಾದ ಪೊಲೀಸರು, ಇನ್ಸ್ಟಾಗ್ರಾಂ ಮುಂಬೈ ಕಚೇರಿ, ಬಳಿಕ ಕ್ಯಾಲಿಫೋರ್ನಿಯಾದಲ್ಲಿರುವ ಮುಖ್ಯ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ, ಮುಸ್ಲಿಂ ವಿದ್ಯಾರ್ಥಿ ಹೆಸರಿನಲ್ಲಿ ಹಿಂದು ಯುವಕ ನಕಲಿ ಖಾತೆಯನ್ನು ತೆರೆದಿದ್ದಾನೆಂದು ತಿಳಿದು ಬಂದಿದೆ. ಬಳಿಕ, ನಕಲಿ ಖಾತೆ ತೆರೆದಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಮೊಬೈಲ್ಅನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದುಬಂದಿದೆ.