ಪುತ್ತೂರು: ಚಿನ್ನಾಭರಣಕ್ಕೆ ಹೊಳಪು ನೀಡುವುದಾಗಿ ಹೇಳಿ ಬಂದಿದ್ದ ವ್ಯಕ್ತಿಯನ್ನು ನಂಬಿ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ಮೋಸ ಹೋದ ಘಟನೆ ಪೆರ್ನಾಜೆಯಲ್ಲಿ ನಡೆದಿದೆ.
ಪೆರ್ನಾಜೆಯ ನಿವಾಸಿ ಹಾಗೂ ನೆಟ್ಟಣಿಗೆ ಮುಟ್ನೂರು ಗ್ರಾ.ಪಂ ಸದಸ್ಯೆಯಾಗಿರುವ ಇಂದಿರಾ ವಂಚನೆಗೊಳಗಾದವರು. ಚಿನ್ನಾಭರಣವನ್ನು ಹೊಳೆಯುವಂತೆ ಪಾಲಿಶ್ ಮಾಡಿ ಕೊಡುವುದಾಗಿ ಹೇಳಿ ಮಾಂಗಲ್ಯ ಸರ ಸೇರಿದಂತೆ ಸುಮಾರು ಐದೂವರೆ ಪವನ್ ಚಿನ್ನಾಭರಣವನ್ನು ಅನುಮಾನವೇ ಬಾರದಂತೆ ಆಕೆಯ ಕಣ್ಣೆದುರೇ ವಂಚಿಸಿ ಪರಾರಿಯಾಗಿದ್ದಾನೆ.
ಆಟೋ ರಿಕ್ಷಾದಲ್ಲಿ ಬಂದಿದ್ದ ಆರೋಪಿ, ಇಂದಿರಾರವರ ಹತ್ತಿರದ ಮನೆಯಲ್ಲಿಯೂ ಇದೇ ಮಾದರಿಯಲ್ಲಿ ವಂಚನೆಗೆ ಪ್ರಯತ್ನಿಸಿದ್ದು, ಆ ಮನೆಯವರು ತಮಗೆ ಯಾವುದೂ ಬೇಡ ಎಂದು ತಿಳಿಸಿದ್ದರಿಂದ ಆತ ಇಂದಿರಾ ಅವರ ಮನೆಗೆ ಬಂದಿದ್ದ ಎಂದು ಹೇಳಲಾಗಿದೆ.
ಇಂದಿರಾ ಅವರ ಮನೆಗೆ ಬಂದ ಅಪರಿಚಿತ ಯುವಕ, ಬೆಳ್ಳಿ, ಚಿನ್ನಾಭರಣ ಹೊಳೆಯುವಂತೆ ಈಗಲೇ ಪಾಲಿಶ್ ಮಾಡಿಕೊಡುವ ಮೂಲಕ ಮಾದರಿ ತೊರಿಸುವುದಾಗಿ ತಿಳಿಸಿದ್ದ. ಇದನ್ನು ನಂಬಿದ ಇಂದಿರಾ ಅವರು ತಮ್ಮ ಬಳಿಯಿದ್ದ ಕಾಲಿನ ಗೆಜ್ಜೆ ತೆಗೆದುಕೊಟ್ಟಿದ್ದರು. ಆ ವ್ಯಕ್ತಿ ಹಳದಿ ಪೌಡರ್ ಬಳಸಿ ಫಳಫಳ ಹೊಳೆಯುವಂತೆ ಮಾಡಿಕೊಟ್ಟಿದ್ದ. ಆ ಬಳಿಕ ಚಿನ್ನದ ಆಭರಣಗಳಿದ್ದರೆ ಅವುಗಳನ್ನೂ ಹೊಳೆಯುವಂತೆ ಮಾಡಿಕೊಡುತ್ತೇನೆಂದು ಹೇಳಿದ್ದು,ಇಂದಿರಾ ಅವರು ತಮ್ಮ ಮಾಂಗಲ್ಯ ಸರ, ಚೈನು, ಎರಡು ಬಳೆ ನೀಡಿದ್ದಾರೆ.ಈ ವೇಳೆ ಚಿನ್ನಾಭರಣಗಳ ಮೇಲೆ ಹಳದಿ ಪೌಡರ್ ಸುರಿದು, ಲಿಕ್ವಿಡ್ ಮತ್ತು ಜೆಲ್ ಹಾಕಿ ಬ್ರಷ್ ಬಳಸಿ ತೊಳೆಯುವಂತೆ ನಟಿಸಿ ಬಳಿಕ ಬ್ಯಾಟರಿ ಚಾಲಿತ ಬೆಂಕಿ ನೀರಲ್ಲಿ ಕುದಿಸಿದ್ದಾನೆ. ಅನಂತರ ನೀರಿನಿಂದ ತೊಳೆದು ಅರಿಶಿನ ಪುಡಿ ಹಾಕಿ, ಪೇಪರ್ ಒಂದರಲ್ಲಿ ಕಟ್ಟಿ ಕೊಟ್ಟಿದ್ದಾನೆ. ಅರ್ಧ ಗಂಟೆಯ ಬಳಿಕ ಪೇಪರ್ ನಿಂದ ತೆಗೆಯುವಂತೆ ಇಂದಿರಾ ಅವರಿಗೆ ತಿಳಿಸಿದ ವಂಚಕ ಅಲ್ಲಿಂದ ಪರಾರಿಯಾಗಿದ್ದ.
ಆತನ ವರ್ತನೆ ಬಗ್ಗೆ ಅನುಮಾನಪಟ್ಟ ಇಂದಿರಾ ಐದೇ ನಿಮಿಷದಲ್ಲಿ ಪೇಪರ್ ಅನ್ನು ತೆಗೆದಿದ್ದು, ಅದರಲ್ಲಿ ಮಾಂಗ್ಯಲ ಸರ ಸೇರಿದಂತೆ ಚಿನ್ನಾಭರಣಗಳು ತುಂಡು ತುಂಡಾಗಿರುವುದು ಕಂಡು ಬಂದಿದ್ದು,ವಂಚಕ ಚಿನ್ನದಂಶವನ್ನು ದ್ರವ ಮಾದರಿಯಲ್ಲಿ ಸಂಗ್ರಹಿಸಿ ಪಡೆದು ಪರಾರಿಯಾಗಿದ್ದ. ಈ ಕುರಿತು ಇಂದಿರಾರವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.