ಚಿಕ್ಕಮಗಳೂರು: 20 ವರ್ಷದ ಯುವತಿಯೊಬ್ಬಳು ಅಪ್ರಾಪ್ತ ಬಾಲಕನನ್ನು ಮದುವೆಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ 20 ವರ್ಷದ ಯುವತಿಗೆ ಫೇಸ್ಬುಕ್ ಮೂಲಕ 17 ವರ್ಷದ ಬಾಲಕನ ಪರಿಚಯವಾಗಿತ್ತು. ಉಭಯ ಕುಟುಂಬದವರಿಗೆ ಒಪ್ಪಿಗೆಯಾದ ಬಳಿಕ ಕಡೂರು ತಾಲೂಕು ಬಿಸಿಲೇಹಳ್ಳಿ ಗ್ರಾಪಂನ ಬ್ರಹ್ಮಸಮುದ್ರ ಗ್ರಾಮದ ಬಾಲಕನ ಮನೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಜೂ.16ರಂದು ಮದುವೆ ನೆರವೇರಿತ್ತು.
ಈ ಕುರಿತು ಜೂ.23ರಂದು ಮಕ್ಕಳ ಸಹಾಯವಾಣಿ 1098ರ ಮೂಲಕ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಸಖರಾಯಪಟ್ಟಣ ಠಾಣೆ ಪೊಲೀಸರ ಜತೆಗೆ ಆಗಮಿಸಿದ ಅಂಗನವಾಡಿ ಮೇಲ್ವಿಚಾರಕಿ ಜಾಕೀರ್ ತಾಜ್, ಗ್ರಾಪಂ ಕಾರ್ಯದರ್ಶಿ ಇಂದ್ರಮ್ಮ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಘರಾಜ್ ಅವರು ಯುವತಿಯನ್ನು ವಶಕ್ಕೆ ಪಡೆದರು. ಯುವತಿ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ, ಕರೊನಾ ನಿಯಮ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಲಾಗಿದೆ. ಯುವತಿಯನ್ನು ಚಿಕ್ಕಮಗಳೂರಿನ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.