ಬೆಂಗಳೂರು: ಎಚ್.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಎಂ ರೇವಣ್ಣ ಅವರಿಗೆ ಬೆಂಗಳೂರಿನಲ್ಲಿ ಇಂದು ಅಭಿನಂದನೆ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ಬರುವ ಮೇ 1ರಂದು ನಾಲ್ಕು ಮಂದಿ ಗಣ್ಯರ ಕೊಲೆ ಮಾಡುವ ಬೆದರಿಕೆ ಪತ್ರ ಬಂದಿರುವುದಾಗಿ ಹೇಳಿದ್ದಾರೆ.
ಬಿಜೆಪಿ ಶಾಸಕ ಸಿ ಟಿ ರವಿ, ಪಬ್ಲಿಕ್ ಟಿವಿಯ ರಂಗನಾಥ್, ನಟ ಶಿವರಾಜಕುಮಾರ್ ಹಾಗೂ ತಮ್ಮನ್ನು ಕೊಲೆ ಮಾಡುವ ಪತ್ರ ಬಂದಿದೆ. ಅದನ್ನು ಪೊಲೀಸರು ಪರಿಶೀಲನೆ ಮಾಡ್ತಾ ಇದ್ದಾರೆ ಎಂದು ಹೇಳಿದರು. ಆದರೆ ಈ ಬಗ್ಗೆ ಹೆಚ್ಚಿನದಾಗಿ ಅವರು ಯಾವುದೇ ವಿವರಣೆ ನೀಡಲಿಲ್ಲ.
ಬದಲಿಗೆ, ಸಿ ಟಿ ರವಿರನ್ನು ಕೊಲೆ ಮಾಡಿದ್ರೆ ನಾನು ಉಳಿಯುತ್ತೇನೆ. ನನ್ನ ಕೊಲೆ ಮಾಡಿದ್ರೆ ಸಿ ಟಿ ರವಿ ಉಳಿತಾರೆ. ಇಂತಹ ಸಂದರ್ಭ ಎದುರಾಗಿದೆ ಎಂದು ನಿಗೂಢವಾಗಿ ಹೇಳಿದರು. ನಾನು ಈ ಬೆದರಿಕೆ ಪತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಕೊಲೆ ಮಾಡೋದಾದರೆ ಎಲ್ಲಿ ಬೇಕಾದರೂ ಕೊಲೆ ಮಾಡ್ತಾರೆ. ಹಾಗಾಗಿ ನಾನು ಹೆದರದೇ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿದ್ದೇನೆ ಎಂದು ಬಿ.ಟಿ.ಲಲಿತಾ ನಾಯಕ್ ಹೇಳಿದರು. .