ಉಜಿರೆ: ಇಲ್ಲಿಯ ಎಸ್.ಡಿ.ಎಂ ಕಾಲೇಜಿನಲ್ಲಿ ಓದುತ್ತಿರುವ ಮಗಳನ್ನು ಕಾಣಲೆಂದು ದೂರದ ರಾಜ್ಯದಿಂದ ಆಸೆಹೊತ್ತು ಬಂದ ತಂದೆ ಮಗಳನ್ನು ಕಂಡು ವಾಪಾಸ್ ತಮ್ಮ ಊರಿಗೆ ಹಿಂತಿರುಗುತ್ತಿದ್ದ ಸಮಯದಲ್ಲಿ ಬಸ್ ನಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಾ.21ರ ಭಾನುವಾರ ಬೆಳಗ್ಗೆ ಉಜಿರೆಯಲ್ಲಿ ನಡೆದಿದೆ.
ಮೂಲತಃ ಹರಿಯಾಣ ಮೂಲದ ವ್ಯಕ್ತಿಯೋರ್ವರು ಉಜಿರೆಯಲ್ಲಿ KSRTC ಬಸ್ಸಿನಲ್ಲಿ ಕೂತ ಸಂದರ್ಭ ಏಕಾಏಕಿ ಕುಸಿದು ಬಿದ್ದಿದ್ದು ಬಸ್ಸಿನಲ್ಲಿ ಇದ್ದವರು ಹಾಗೂ ಸಿಬ್ಬಂದಿ ಇವರನ್ನು ಹಾಗೆಯೇ ಬಸ್ಸಿನಿಂದ ಇಳಿಸಿ ಉಜಿರೆಯ ಬಸ್ಟ್ಯಾಂಡಿನಲ್ಲಿ ಕೂರಿಸಿದ್ದಾರೆ. ದುರಾದೃಷ್ಟವಶಾತ್ ಅವರಿಗೆ ಅಲ್ಲೇ ಹೃದಯಾಘತವಾಗಿ ಪ್ರಾಣ ಬಿಟ್ಟಿದ್ದಾರೆ.
ಇವರ ಮಗಳು ಉಜಿರೆಯ ಸ್.ಡಿ.ಎಂ ಕಾಲೇಜಿನಲ್ಲಿ ಓದುತ್ತಿದ್ದು, ಹಾಸ್ಟೆಲ್ ನಲ್ಲಿ ವಾಸ್ತವ್ಯ ಇರುವ ಕಾರಣ, ಮಗಳನ್ನು ನೋಡಿಕೊಂಡು ಬರಲು ಅಪ್ಪ ಹರಿಯಾಣದಿಂದ ಆಗಮಿಸಿದ್ದಾರೆ. ಮಗಳನ್ನು ಭೇಟಿಯಾಗಿ ವಾಪಸ್ಸು ತೆರಳುವ ಸಂದರ್ಭದಲ್ಲಿ ವಿಧಿ ಬೇರೆಯದೇ ಆಟ ತೋರಿದೆ.
ಬಸ್ಸಿನಲ್ಲಿ ಇರುವವರು ಮತ್ತು ಸಿಬ್ಬಂದಿ ಸ್ವಲ್ಪ ಮುಂಜಾಗ್ರತೆ ವಹಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡುತ್ತಿದ್ದರೆ ಬಹುಶಃ ಒಂದು ಜೀವವನ್ನು ಉಳಿಸಬಹುದಿತ್ತೇನೋ? ಇದ್ಯಾವುದನ್ನೂ ಮಾಡದೆ ಮಾನವೀಯತೆ ಮರೆತ ಕಾರಣಕ್ಕಾಗಿ ವ್ಯಕ್ತಿಯು ಬಸ್ ಸ್ಟಾಂಡ್ ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.