ಬೆಳ್ತಂಗಡಿ: ಬಿಜೆಪಿ ಯುವ ಮೋರ್ಛಾ ಮುಖಂಡ ಶಶಿರಾಜ್ ಶೆಟ್ಟಿ ಬಂಧನ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಳ್ತಂಗಡಿಯ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ ಹರೀಶ್ ಪೂಂಜ, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ, ಬೆಳ್ತಂಗಡಿ ತಹಸೀಲ್ದಾರ್ ಮತ್ತು ಬೆಳ್ತಂಗಡಿ ಠಾಣೆ ಪೊಲೀಸರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ.
ಕನ್ನಡ ಮತ್ತು ತುಳು ಭಾಷೆ ಮಿಶ್ರಿತ ಪ್ರತಿಭಟನಾ ಭಾಷಣ ಮಾಡಿದ ಪೂಂಜ, ಬೆಳ್ತಂಗಡಿ ಠಾಣೆ ಇನ್ಸ್ ಪೆಕ್ಟರ್ ಮತ್ತು ದಕ್ಷಿಣ ಕನ್ನಡ ಎಸ್ಪಿ ಕಾಂಗ್ರೆಸ್ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಲ್ಲದೇ, ಕಾರ್ಯಕರ್ತರಿಗಾಗಿ ನಾನು ಪೊಲೀಸರ ಕಾಲರ್ ಹಿಡಿಯಲೂ ಸಿದ್ಧ ಎಂದಿದ್ದಾರೆ.
ಅಲ್ಲದೇ, ಎಸ್ಪಿ ತಲೆಯ ಮೇಲೆ ಕೂದಲು ಇಲ್ಲದಿರುವುದು ಮಾತ್ರವಲ್ಲ ತಲೆಯೊಳಗೆ ಮೆದುಳು ಕೂಡಾ ಇಲ್ಲ ಎಂದು ಟೀಕಿಸಿರುವ ಹರೀಶ್ ಪೂಂಜ, ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪರಿಸ್ಥಿತಿಯನ್ನು ಬೆಳ್ತಂಗಡಿಯಲ್ಲೂ ನಿರ್ಮಾಣ ಮಾಡುವುದಾಗಿಯೂ ವಿವಾದಾಸ್ಪದ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.