ಮಂಗಳೂರು: ಮಾರ್ಚ್ 3ರಿಂದ 10ರವರೆಗೆ ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಪ್ರಯುಕ್ತ ಬೆಂಗರೆ ಸರೋಜಿನಿ ಪುಂಡಲೀಕ ಕರ್ಕೇರ ಸ್ಮರಣಾರ್ಥ ದಕ್ಷಿಣ ಭಾರತ ಮಟ್ಟದ ಫುಟ್ಬಾಲ್ ಟೂರ್ನಿಯು ನಗರದ ಫುಟ್ಬಾಲ್ ಮೈದಾನದಲ್ಲಿ ನಡೆಯಲಿದೆ.
ದಕ್ಷಿಣ ಭಾರತ ಮಟ್ಟದ ಫುಟ್ಬಾಲ್ ಟೂರ್ನಿಯಲ್ಲಿ ಕೇರಳ, ತಮಿಳುನಾಡು, ಗೋವಾದ ಆಯ್ದ 16 ತಂಡಗಳು ಭಾಗವಹಿಸಲಿವೆ. ವಿಜೇತ ತಂಡಕ್ಕೆ ಪ್ರಥಮ 31 ಲಕ್ಷ, ದ್ವಿತೀಯ 150 ಸಾವಿರ ಬಹುಮಾನ ನಿಗದಿಪಡಿಸಲಾಗಿದೆ. ಸಂಘದ ಅಮೃತ ಮಹೋತ್ಸವದ ಅಂಗವಾಗಿ 31 ಕೋಟಿ ವೆಚ್ಚದ ಕಾರ್ಯಯೋಜನೆ ರೂಪಿಸಲಾಗಿದೆ.
ಅಮೃತ ಮಹೋತ್ಸವ ಸಮಿತಿ ಸಂಚಾಲಕ ವಿಜಯ ಸುವರ್ಣ ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನು ಶೈಕ್ಷಣಿಕ ಕ್ಷೇತ್ರಕ್ಕೆ 325 ಲಕ್ಷ, ಅಮೃತ ಮಹೋತ್ಸವ ಕಟ್ಟಡಕ್ಕೆ 325 ಲಕ್ಷ, ಊರಿನ ವಿವಿಧ ಸೌಲಭ್ಯಗಳಿಗೆ 320 ಲಕ್ಷ, ಕ್ರೀಡಾಕೂಟಗಳಿಗೆ 730 ಲಕ್ಷ ನಿಗದಿಪಡಿಸಲಾಗಿದೆ. 75 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹಗ್ಗಜಗ್ಗಾಟ, ನದಿಯಲ್ಲಿ ಬಲೆ ಬೀಸುವುದು, ಲಗೋರಿ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಏಪ್ರಿಲ್ ಕೊನೆಯ ವಾರದಲ್ಲಿ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.
ಮಾ.3ರಂದು ಸಂಜೆ 4 ಗಂಟೆಗೆ ಮೇಯರ್ ಸುಧೀರ್ ಶೆಟ್ಟಿ ಟೂರ್ನಿಗೆ ಚಾಲನೆ ನೀಡುವರು. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಂ ಅಧ್ಯಕ್ಷತೆ ವಹಿಸುವರು. ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್ ಮತ್ತಿತರರು ಭಾಗವಹಿಸುವರು ಎಂದು ಹೇಳಿದರು.
ಯುವಕ ಮಂಡಲದ ಅಧ್ಯಕ್ಷ ಸಂಜಯ್ ಸುವರ್ಣ, ಉಪಾಧ್ಯಕ್ಷ ಪುಂಡಲೀಕ ಮೈಂದನ್, ಪ್ರಮುಖರಾದ ಹರೀಶ್ ಕಾಂಚನ್, ಸಪ್ಪಾ ಅನಿಲ್, ಭಾಸ್ಕರ ಬೆಂಗ್ರೆ ಇದ್ದರು.