ಪಾಟ್ನಾ: ಪತಿಗೆ ಊಟಕ್ಕೆ ಮೀನು ಸಾಂಬಾರ್ ಕಡಿಮೆ ಆಗಿದ್ದಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದೆ. ಮಹಿಳೆಯ ದುಡುಕು ನಿರ್ಧಾರದಿಂದ ಇದೀಗ ಮನೆಗೆ ಮೀನು ತಂದಿದ್ದೇ ತಪ್ಪಾಯ್ತು ಎಂದು ಪತಿ ಕಣ್ಣೀರು ಹಾಕುತ್ತಿದ್ರೆ, ಅಮ್ಮನನ್ನ ಕಳೆದುಕೊಂಡ ನಾಲ್ಕು ಮಕ್ಕಳು ಅನಾಥವಾಗಿವೆ.
30 ವರ್ಷದ ಸಾರಾದೇವಿ ಪತಿ ಕುಂದನ್ ಮಂಡಲ್ ಬುಧವಾರ ಮಧ್ಯಾಹ್ನ 300 ರೂ. ನೀಡಿ ಮೀನು ತಂದಿದ್ದರು.ಆಕೆ ಚೆನ್ನಾಗಿ ಮೀನು ಸಾಂಬಾರ್ ಮಾಡಿ ಮಕ್ಕಳಿಗೆ ತಿನ್ನಿಸಿ ತಾನೂ ಊಟ ಮಾಡಿದ್ದಳು. ಆದ್ರೆ ಪತಿಗೆ ಮೀನು ಸಾಂಬಾರ್ ಸ್ವಲ್ಪವೇ ಉಳಿದಿದ್ದಕ್ಕೆ ಆಕೆ ಬೇಸರಗೊಂಡಿದ್ದಳು. ಸ್ವಲ್ಪವೇ ಮೀನು ಸಾಂಬಾರ್ ಉಳಿದಿದೆ ನೀವು ಊಟ ಮಾಡಿ ಎಂದಿದ್ದಾಳೆ. ಅದಕ್ಕೆ ಕುಂದನ್ ಸಂಜೆ ಮತ್ತೆ ಮೀನು ತರೋಣ, ನೀನು ಊಟ ಮಾಡು ಅಂತ ಹೇಳಿ ಮನೆಯಿಂದ ಹೊರ ಹೋಗಿದ್ದಾರೆ. ಪತಿ ಹೊರಗೆ ಹೋಗುತ್ತಿದ್ದಂತೆ ಸಾರಾದೇವಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನು ಸಾರಾದೇವಿ ವಿಷ ಸೇವಿಸಿದ ಬಳಿಕ ಅಸ್ವಸ್ಥಗೊಂಡ ವಿಷಯ ನೆರೆಹೊರೆಯವರಿಗೆ ತಿಳಿದಿದೆ. ಕೂಡಲೇ ಕುಂದನ್ ಗೆ ವಿಷಯ ತಿಳಿಸಿ, ಮಹಿಳೆಯನ್ನ ಮಾಯಾಗಂಜ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾರಾದೇವಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ನಡೆಸುತ್ತಿದ್ದಾರೆ.