ಮೈಸೂರು: ತಲಕಾಡಿನ ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಫೋಟೋ ಶೂಟ್ ಮಾಡುತ್ತಿದ್ದಾಗ ಆಯತಪ್ಪಿ ಶಶಿಕಲಾ ನದಿಗೆ ಬಿದ್ದಿದ್ದಾರೆ. ಶಶಿಕಲಾಳನ್ನು ಹಿಡಿಯಲು ಹೋಗಿ ಚಂದ್ರು ಸಹ ನದಿಗೆ ಬಿದ್ದಿದ್ದಾರೆ. ಈಜು ಬಾರದ ಹಿನ್ನೆಲೆಯಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಇದೀಗ ನವಜೋಡಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದೆ. ಫೋಟೊಶೂಟ್ ಗೆ ತೆಪ್ಪ ನೀಡಿದ ವ್ಯಕ್ತಿ, ಫೋಟೊಗ್ರಾಫರ್ ಸೇರಿದಂತೆ ಆರು ಜನರ ಮೇಲೆ ತಲಕಾಡು ಪೊಲೀಸ್ ಠಾಣೆಯಲ್ಲಿ ಐಸಿಪಿ ಸೆಕ್ಷನ್ 304ರ ಅಡಿ (ನಿರ್ಲಕ್ಷ್ಯದಿಂದ ಮರಣವನ್ನುಂಟು ಮಾಡುವುದು) ಪ್ರಕರಣ ದಾಖಲಾಗಿದೆ.
ಫೋಟೊಗ್ರಾಫರ್ ನಿಖಿಲ್, ತೆಪ್ಪವನ್ನು ನೀಡಿದ ಕಟ್ಟೆಪುರ ನಿವಾಸಿ ಮೂಗಪ್ಪ ಸೇರಿದಂತೆ ಆರು ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉನ್ನತಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಜೋಡಿಗಳ ಸಾವಿಗೆ ನಿಖರ ಕಾರಣ ಏನು ಗೊತ್ತಾ..?
ಮೂಲತಃ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು (28), ಶಶಿಕಲಾ (20) ಅವರ ಮದುವೆ ನ. 22ರಂದು ನಿಶ್ಚಯವಾಗಿತ್ತು. ಹೀಗಾಗಿ, ಕಾವೇರಿ ನದಿ ಮಧ್ಯೆ ಫೋಟೋ ತೆಗೆಸಿಕೊಳ್ಳಲು ಅವರಿಬ್ಬರೂ ಮುಂದಾಗಿದ್ದರು. ಶಶಿಕಲಾ ಹೈ ಹೀಲ್ಸ್ ಚಪ್ಪಲಿ ಧರಿಸಿದ್ದರಿಂದ ತೆಪ್ಪದ ಮೇಲೆ ನಿಂತಾಗಿ ಅದು ಮಗುಚಿದೆ ಎಂಬುದು ಬಯಲಾಗಿದೆ. ಉದ್ದದ ಗೌನ್ ಧರಿಸಿದ್ದ ಶಶಿಕಲಾ ಹೈಹೀಲ್ಸ್ ಚಪ್ಪಲಿ ಹಾಕಿಕೊಂಡು, ನದಿಯ ಮಧ್ಯೆ ತೆಪ್ಪದಲ್ಲಿ ನಿಂತು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು. ಆಗ ತೆಪ್ಪ ಮಗುಚಿದೆ. ಈಜು ಬಾರದ ಹಿನ್ನೆಲೆಯಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು ಎಂದು ಪೊಲೀಸರ ಮುಂದೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.