ಮಂಡ್ಯ: ಎಂಥೆಂತಾ ಕಳ್ಳತನ ಪ್ರಕರಣಗಳನ್ನು ನೀವೆಲ್ಲಾ ನೋಡಿರ್ತಿರಾ, ಅದರ ಬಗ್ಗ ಕೇಳಿರ್ತಿರಾ. ಆದ್ರೆ ಇಂತಹ ಕಳ್ಳತನ ಪ್ರಕರಣವನ್ನು ನೀವು ಯಾವತ್ತೂ ನೋಡಿರೋದಕ್ಕೆ ಸಾಧ್ಯಾನೇ ಇಲ್ಲ. ಅಂತಹದ್ದೊಂದು ವಿಚಿತ್ರವಾದ ಕಳ್ಳತನ ಪ್ರಕರಣ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದ ಶಿಂಷಾ ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕಳ್ಳತನ ಮಾಡುವುದಕ್ಕೆ ಅಂತಾ ಬಂದ ಕಳ್ಳನೊಬ್ಬ ಅಂಗನವಾಡಿಯ ಬೀರುವಿನ ಬೀಗ ಮುರಿದಿದ್ದಾನೆ. ಆದರೆ, ಅಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದಿದ್ದಾಗ ಅಲ್ಲೇ ಇದ್ದ ಅಡುಗೆ ಸಾಮಗ್ರಿ ತೆಗೆದುಕೊಂಡು ಗ್ಯಾಸ್ಸ್ಟೌ ಹಚ್ಚಿ ಪುಳಿಯೋಗರೆ ತಯಾರಿಸಿಕೊಂಡು ತಿಂದಿದ್ದಾನೆ. ನಂತರ ನೋಟ್ ಪುಸ್ತಕವೊಂದರಲ್ಲಿ ದುಂಡು ದುಂಡು ಅಕ್ಷರಗಳಲ್ಲಿ ಮೂರು ಪುಟಗಳಲ್ಲಿ ದಿನಚರಿ, ತನಗಾಗಿರುವ ಅನುಭವಗಳನ್ನು ಕವನ, ಕಥೆ ರೂಪದಲ್ಲಿ ಬರೆದು ತೆರಳಿದ್ದಾನೆ.
ಎಂದಿನಂತೆ ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಬೆಳಗ್ಗೆ ಕೇಂದ್ರದ ಬಾಗಿಲು ತೆರೆಯಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಪಂಡಿತಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮಹದೇವು ಸ್ಥಳ ಪರಿಶೀಲಿಸಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.