ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಸಾವಿಗೀಡಾದ ತಂದೆಯ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನಲ್ಲಿ ಪುತ್ರಿಯೊಬ್ಬಳು ನೆರವೇರಿಸಿದ್ದಾಳೆ. ಬೆಂಗಳೂರಿನ ಶಕ್ತಿಗಣಪತಿನಗರ ವಾರ್ಡ್ ನಂ-74ರಲ್ಲಿ ಆಟೋ ಚಾಲಕೊರಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರು ಜಯದೇವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಟೋ ಚಾಲಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಅವರಲ್ಲಿ ಸೋಂಕು ಪತ್ತೆಯಾಗಿದ್ದರಿಂದಾಗಿ ಅವರ ಕುಟುಂಬದವರೆಲ್ಲರೂ ಹೋಂ ಕ್ವಾರಂಟೈನ್ ನಲ್ಲಿ ಇದ್ದರು.
ಈ ಆಟೋ ಚಾಲಕನಿಗೆ ಇಬ್ಬರು ಹೆಣ್ಣು ಹಾಗೂ ಒಂದು ಗಂಡು ಸೇರಿ ಒಟ್ಟು ಮೂವರು ಮಕ್ಕಳು. ತಂದೆಯ ಸಾವಿನಿಂದಾಗಿ ಕಂಗಾಲಾದ ಮನೆಯ ಹಿರಿಯ ಮಗಳು ಬಿ.ಬಿ.ಎಂ.ಪಿ.ಸದಸ್ಯ ಎಮ್.ಶಿವರಾಜು ಸಹಾಯ ಪಡೆದು ಜಯದೇವ ಆಸ್ಪತ್ರೆಯಿಂದ ಸುಮನಹಳ್ಳಿ ಚಿತಾಗಾರಕ್ಕೆ ತಂದೆಯ ಶವವನ್ನ ತಂದಿದ್ದಾಳೆ. ಅಧಿಕಾರಿಗಳ ಒಪ್ಪಿಗೆ ಪಡೆದು ಪಿಪಿಇ ಕಿಟ್ ಧರಿಸಿ ಸ್ವತಃ ತಂದೆಯ ಅಂತ್ಯ ಸಂಸ್ಕಾರವನ್ನೂ ನಡೆಸಿದ್ದಾರೆ. ಕೊನೆಗಾಲದಲ್ಲಿ ತಮ್ಮ ಅಂತಿಮ ಸಂಸ್ಕಾರ ಮಾಡುವುದಕ್ಕಾದ್ರೂ ಒಂದು ಗಂಡು ಮಗು ಬೇಕೆನ್ನುವವರ ಮಧ್ಯೆ ಹೆಣ್ಣುಮಗಳೊಬ್ಬಳು ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿ ಜವಾಬ್ದಾರಿ ಮೆರೆದಿದ್ದಾರೆ.