
ಉಡುಪಿ: ಶ್ರೀ ಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ಶ್ರೀರಾಘವೇಂದ್ರ ಮಠದ ಸನ್ನಿಧಾನದಲ್ಲಿ ಬಹು ವೈಭವದಿಂದ ಜರಗಿತು.ಶ್ರೀಲಕ್ಷ್ಮೀವರತೀರ್ಥರ ಪೂರ್ವಾಶ್ರಮದ ಕುಟುಂಬಿಕರಿಂದ ಈ ಸಮಾರಂಭವು ಶಾಸ್ತ್ರೋಕ್ತವಾಗಿ ಆಯೋಜನೆಗೊಂಡಿತ್ತು.
ಪ್ರಾತಃಕಾಲದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮವನ್ನು ವೇದಮೂರ್ತಿ ಶ್ರೀನಟರಾಜ ಉಪಾಧ್ಯಾಯ ಹಾಗೂ ವೇದಮೂರ್ತಿ ಶ್ರೀಅನಿಲ್ ನಡೆಸಿಕೊಟ್ಟರು.ತದನಂತರ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ.ಲಾತವ್ಯಆಚಾರ್ಯರು ನೆರವೇರಿಸಿದರು.ಅಪರಾಹ್ನ ಅನ್ನಸಂತರ್ಪಣೆ ಜರಗಿತು.
ಈ ಶುಭಸಂದರ್ಭದಲ್ಲಿ ಶ್ರೀರಾಯರಮಠದ ಶ್ರೀಜಯತೀರ್ಥ ಆಚಾರ್ಯ, ಅಪ್ಪಣ್ಣಆಚಾರ್ಯ,ಶ್ರೀಹರಿಕೃಷ್ಣ ಪುನರೂರು,ಶ್ರೀಲಕ್ಷ್ಮೀನಾರಾಯಣ ತಂತ್ರಿ, ಸೊಂಡೂರುಪ್ರಹ್ಲಾದಆಚಾರ್ಯ,ಶ್ರೀಪಿ.ವಾದಿರಾಜ ಆಚಾರ್ಯ, ಶ್ರೀ ಪಿ.ಶ್ರೀನಿವಾಸ ಆಚಾರ್ಯ, ಶ್ರೀಪಿ.ವೃಜನಾಥ ಆಚಾರ್ಯ,ಶ್ರೀಗೋಪಾಲಕೃಷ್ಣಭಟ್ ಒಳಕಾಡು,ಡಾ!!ವ್ಯಾಸರಾಜ ತಂತ್ರೀ, ಚೆನ್ನೈನ ಶ್ರೀರಾಜಗೋಪಾಲ್, ಶ್ರೀರಾಜೇಂದ್ರಆಚಾರ್ಯಬಡಗುಬೆಟ್ಟು,ಶ್ರೀಪಾದರಪೂರ್ವಾಶ್ರಮದ ಸಹೋದರರು,ಶ್ರೀಅಕ್ಷೋಭ್ಯ ಆಚಾರ್ಯ,ಶ್ರೀ ಅರ್ಜುನ ಆಚಾರ್ಯ,ಶ್ರೀವಿಶಾಲ ಆಚಾರ್ಯ,ಶ್ರೀಶಂಕರನಾರಾಯಣ ಹೊಳ್ಳ ಕುಂದಾಪುರ, ಇಮೇಜ್ ಮೊಬೈಲ್ ಸಂಸ್ಥೆಯ ಶ್ರೀಯಾದವ,ಶ್ರೀರಾಕೇಶ್ ಹಾಗೂ ಇನ್ನೂ ಅನೇಕ ಮಹನೀಯರು ಶ್ರೀಪಾದರ ಆರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೇಮಾರು ಶ್ರೀಸಾಂದೀಪನಿ ಮಠದ ಆಶ್ರಮದಲ್ಲಿ ಶ್ರೀಈಶವಿಠಲದಾಸ ಸ್ವಾಮೀಜಿಯವರು ಶಿರೂರು ಶ್ರೀಪಾದರ ಆರಾಧನಾ ನಿಮಿತ್ತ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆಯನ್ನು ಆಯೋಜಿಸಿದ್ದರು.


