ಚಿಕ್ಕಮಗಳೂರು : ಆರ್ಥಿಕ ನಷ್ಟ, ಸರ್ಕಾರದ ಅಸಹಾಕಾರದಿಂದ ಕಾರ್ಮಿಕರೇ ಮಾಲೀಕರಾಗಿದ್ದ ಏಷ್ಯಾ ಖಂಡದ ಬೆಸ್ಟ್ ಸಹಕಾರ ಸಾರಿಗೆ ಸಂಸ್ಥೆ ಬೀಗ ಹಾಕಿ ಮೂರು ವರ್ಷಗಳೇ ಕಳೆದಿದೆ. ಸಂಸ್ಥೆಯನ್ನು ಮಾರಾಟಕ್ಕೆ ಇಟ್ಟಿದ್ದರೂ ತೆಗೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ.ಇದರಿಂದ ಕಾರ್ಮಿಕರ ಸ್ಥಿತಿ ದಿನದಿಂದ ದಿನಕ್ಕೆ ಶೋಚನಿಯವಾಗುತ್ತಿದೆ. ಇದರ ನಡುವೆ ಕಂಪನಿಯಿಂದ ಕಾರ್ಮಿಕರಿಗೆ ಬರಬೇಕಾಗಿರುವ ಪಿಎಫ್ ಸೇರಿದಂತೆ ಆರ್ಥಿಕ ನಷ್ಟ, ಕಾರ್ಮಿಕರ ಬಾಕಿ ವೇತನ ಬಾಕಿ ಬಗ್ಗೆ ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿದೆ.
ಮಲೆನಾಡಿನ ಪ್ರತಿಷ್ಠಿತ ಸಹಕಾರ ಸಾರಿಗೆಯ ಅಧ್ಯಕ್ಷರಾಗಿದ್ದ .ಎಸ್ ಧರ್ಮಪ್ಪರಿಗೆ ನ್ಯಾಯಾಂಗ ಬಂಧನ ವಿಧಿಸಿ ಕೊಪ್ಪದ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆಯೂ ಕಳೆದ ಮೂರು ವರ್ಷದ ಹಿಂದೆ ನಷ್ಟದ ನೆಪವೊಡ್ಡಿ ತನ್ನೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಈ ವೇಳೆ ಕಾರ್ಮಿಕರಿಗೆ ಪಿಎಫ್ ಹಣ ಹಾಗೂ ಸಂಬಳವನ್ನು ನೀಡಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ಸಂಬಂಧ ಕಾರ್ಮಿಕ ಸಂಘಟನೆಯೂ ಕೋರ್ಟ್ ನಲ್ಲಿ ದಾವೆಯನ್ನು ಹೂಡಿದ್ದರು.ಇಂದು ಬೆಳಿಗ್ಗೆ ಕೊಪ್ಪ ಪೊಲೀಸರು ಭಂಡಿಗಡಿಯಲ್ಲಿ ಧರ್ಮಪ್ಪ ರವರನ್ನು ಬಂಧಿಸಿ ಕೋರ್ಟ್’ಗೆ ಹಾಜರು ಪಡಿಸಿದ್ದರು. ಧರ್ಮಪ್ಪ ರವರ ಮೇಲಿರುವ ಆರೋಪಗಳನ್ನು ಪರಿಶೀಲಿಸಿರುವ ಕೋರ್ಟ್ ಜೂನ್ 10ರ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗಾದ ಬೆಟ್ಟಗುಡ್ಡಗಳ ಬಹುತೇಕ ಗ್ರಾಮವನ್ನ ನೋಡಿವೆ. ಕಾರ್ಮಿಕರ ಬೆವರಲ್ಲಿ ಜನ್ಮ ತಾಳಿದ ಈ ಸಂಸ್ಥೆ ಮಲೆನಾಡ ಕುಗ್ರಾಮಗಳ ಮನೆ-ಮನಗಳಲ್ಲಿ ಬೆಸೆದ ಕೊಂಡಿಯ ಪರಿಗೆ ಏಷ್ಯಾದಲ್ಲೇ ಬೆಸ್ಟ್ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿತ್ತು. ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್ನಿಂದ 76 ಬಸ್ಗೆ ತಂದಿದ್ದರು. ರಾಜ್ಯಕ್ಕೆ ಕೆ.ಎಸ್.ಆರ್.ಟಿ.ಸಿ. ಮಲೆನಾಡಿಗೆ ಸಹಕಾರ ಸಾರಿಗೆ ಎಂಬ ಗಾದೆಯೂ ಜನ್ಮ ತಾಳಿತ್ತು. ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕದ ಏಕೀಕರಣಕ್ಕೆ ಹೋರಾಡಿದವರು, ವಿಧ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕರ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಷ್ಟು ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಕಾರ್ಮಿಕರ ಸಂಸ್ಥೆಯದ್ದು. ಅಂತಹಾ ಸಂಸ್ಥೆ ಸರ್ಕಾರದ ರೀತಿ-ನೀತಿ-ರಿವಾಜುಗಳಿಂದ ಕಾರ್ಮಿಕರಿಗೆ ಸಂಬಳ ಕೊಡಲಾಗದೆ ಕಳೆದ ಮೂರು ವರ್ಷಗಳಿಂದ ಬೀಗ ಹಾಕಿದೆ. ಇದರಿಂದ ಕಾರ್ಮಿಕರ ಜೀವನ ನಡೆಸುವುದೇ ದುಸ್ಥಿರವಾಗಿದೆ. ಸೂಕ್ತ ನ್ಯಾಯಕ್ಕಾಗಿ ಕಾರ್ಮಿಕರು ಕೊಪ್ಪದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಇದರ ನಡುವೆ ಕೆಲ ಕಾರ್ಮಿಕರು ಕೋರ್ಟ್ ಗೆ ಹೋಗಿ ದಾವೆ ಹಾಕಿದ್ದರು. ಸಂಸ್ಥೆ ಅಧ್ಯಕ್ಷರಾದ ಧರ್ಮಪ್ಪ ವಿರುದ್ದ ವಂಚನೆ, ಮೋಸ ,ಕಂಪನಿ ಹಣ ದುರುಪಯೋಗದ ಆರೋಪವನ್ನು ಕಾರ್ಮಿಕರು ಮಾಡಿದ್ದರು.