ಉಪ್ಪಿನಂಗಡಿ: ಗ್ರಾ.ಪಂ. ಮಾಜಿ ಸದಸ್ಯೆ ಹಾಗೂ ಆಕೆಯ ಪತಿಯ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ದಾಖಲಿಸಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
34 ನೆಕ್ಕಿಲಾಡಿ ಗ್ರಾ.ಪಂ. ಮಾಜಿ ಸದಸ್ಯೆ ಸತ್ಯವತಿ ಹಾಗೂ ಆಕೆಯ ಪತಿ ಹರೀಶ್ ಪೂಂಜಾ ವಿರುದ್ಧ 34 ನೆಕ್ಕಿಲಾಡಿ ಗ್ರಾಮದ ಅಣ್ಣಿ ಆದಿ ದ್ರಾವಿಡ ಎಂಬವರ ಪತ್ನಿ ಲೀಲಾ ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತನ್ನ ಅತ್ತೆ ಬೊಮ್ಮಿಯವರ ಹೆಸರಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರಾದ ಕೊಳವೆ ಬಾವಿಯನ್ನು ಅವರೇ ಉಪಯೋಗಿಸಿಕೊಂಡಿದ್ದು, ಅಲ್ಲದೇ, ನನ್ನ ಮುಗ್ಧತೆಯನ್ನು ಉಪಯೋಗಿಸಿಕೊಂಡು ಹಣಕಾಸು ಸಂಸ್ಥೆಯೊಂದರಿಂದ ನನ್ನ ಹೆಸರಿನಲ್ಲಿ 30 ಸಾವಿರ ಸಾಲ ಪಡೆಯಲು ಹೇಳಿ ಅದನ್ನು ಅವರೇ ತೆಗೆದು ಕೊಂಡಿದ್ದಲ್ಲದೆ, ಅದನ್ನು ಕಟ್ಟಲು ಹೇಳಿದಾಗ ನನಗೆ 34 ನೆಕ್ಕಿಲಾಡಿ ಅಲಿಮಾರ್ ನಿವಾಸಿ ಸತ್ಯವತಿ ಹಾಗೂ ಅವರ ಪತಿ ಹರೀಶ್ ಪೂಂಜಾ ಜಾತಿ ನಿಂದನೆಗೈದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇವರು ಮಾಡಿರುವ ವಂಚನೆ ಬಗ್ಗೆ ಪೊಲೀಸ್ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.ಇನ್ನು ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.