ಬೆಂಗಳೂರು: ರಾಜ್ಯದ ಎಸ್ಕಾಂಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಕನಿಷ್ಠ ಖಚಿತ ಪ್ರೋತ್ಸಾಹ ಧನ ಪರಿಷ್ಕರಣೆ ಮಾಡಲು ಸಮಿತಿ ರಚನೆ ಮಾಡಲಾಗಿದೆ.
ಇಂಧನ ಸಚಿವ ವಿ. ಸುನೀಲ್ ಕುಮಾರ್ ಆದೇಶದ ಮೇರೆಗೆ ಸಮಿತಿ ರಚನೆಯಾಗಿದೆ.
ಪ್ರೋತ್ಸಾಹ ಧನ ಪರಿಷ್ಕರಣೆ ಹಾಗೂ ಸೇವೆ ಖಾಯಂಗೊಳಿಸುವಂತೆ ಆಗ್ರಹಿಸಿ ಹಿಂದೆ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟ ಮನವಿ ಸಲ್ಲಿಸಿತ್ತು.
ಹೀಗಾಗಿ ಹಿಂದೆ ಸೂಕ್ತ ಪರಿಹಾರ ಮಾರ್ಗ ಕಂಡು ಹಿಡಿಯಲು ಹನ್ನೆರಡು ಸಾವಿರ ರೂಪಾಯಿ ಮಾಸಿಕ ಕನಿಷ್ಠ ಖಚಿತ ಪ್ರೋತ್ಸಾಹ ನೀಡುವಂತೆ
ಇಂಧನ ಇಲಾಖೆ ಹಿರಿಯ ಅಧಿಕಾರಿ ನೇತೃತ್ವದಲ್ಲಿ ರಚಿಸಲ್ಪಟ್ಟಿದ್ದ ಸಮಿತಿ ಶಿಫಾರಸು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಬೆಸ್ಕಾಂ ಎಂಡಿ ಅಧ್ಯಕ್ಷತೆಯಲ್ಲಿ ಹೆಸ್ಕಾಂ ಎಂಡಿ, ಜೆಸ್ಕಾಂ ಜಿಎಂ, ಮೈಸೂರು ಕಾರ್ಯಪಾಲನಾ ವೃತ್ತದ ಅಧೀಕ್ಷಕ ಅಭಿಯಂತರು, ಹೆಸ್ಕಾಂ ತಾಂತ್ರಿಕ ನಿರ್ದೇಶಕರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ.
ಈ ಮಧ್ಯೆ ಸೇವಾ ಖಾಯಂ ವಿಚಾರದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವುದರಿಂದ ಕಾನೂನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಚಿವ ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.