ಶಿವಮೊಗ್ಗ: ಪ್ರೀತಿಸುವಂತೆ ನೆರೆ ಮನೆಯವನು ನೀಡುತ್ತಿದ್ದ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದ ವಸವೆ ಗ್ರಾಮದಲ್ಲಿ ನಡೆದಿದೆ.
ವಿದ್ಯಾಶ್ರೀ (21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ವಸವೆ ಗ್ರಾಮದ ಕುಂಟಿಗೆಯ ಪಟೇಲ್ ಈಶ್ವರಪ್ಪ ಗೌಡ ಎಂಬವರ ಪುತ್ರಿಯಾಗಿರುವ ವಿದ್ಯಾಶ್ರೀ ಸಾಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದರು.
ಪ್ರತಿ ನಿತ್ಯ ಕಾಲೇಜಿಗೆ ತೆರಳುವ ವೇಳೆ ಪ್ರೀತಿಸುವಂತೆ ಪಕ್ಕದ ಮನೆಯ ಶಶಾಂಕ್ ಎಂಬಾತ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ವಿದ್ಯಾಶ್ರೀ ಯುವಕನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದರು. ಆದ್ರೆ ಯುವಕ ಮಾತ್ರ ಪ್ರತಿನಿತ್ಯ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಶಶಾಂಕ್ ಕಿರುಕುಳಕ್ಕೆ ಬೇಸತ್ತು ಏಪ್ರಿಲ್ 19ರಂದು ವಿದ್ಯಾಶ್ರೀ ವಿಷ ಸೇವಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ್ ನ ಕೆಎಂಸಿ ಆಸ್ಪತ್ರೆಯಲ್ಲಿ ವಿದ್ಯಾಶ್ರೀ ಭಾನುವಾರ ಸಾವನ್ನಪ್ಪಿದ್ದಾರೆ.
ವಿದ್ಯಾಶ್ರೀ ಸಾವಿನ ಸಂಬಂಧ ಸೋದರ ರಕ್ಷಿತ್ ದೂರು ದಾಖಲಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮ ಮಗಳ ಸಾವಿಗೆ ಶಶಾಂಕ್ ಕಾರಣ. ಹಾಗಾಗಿ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ವಿದ್ಯಾಶ್ರೀ ಪೋಷಕರು ಆಗ್ರಹಿಸಿದ್ದಾರೆ.