ಬೆಳ್ತಂಗಡಿ: ನಾವು ಕಾಲಿಡುವ ಕ್ಷೇತ್ರದ ಮೇಲೆ ನಮಗೆ ಆಸಕ್ತಿ ಹಾಗೂ ಪ್ರೀತಿ ಇದ್ದರೆ ಆ ಕ್ಷೇತ್ರದಲ್ಲಿ ನಾವು ಸಾಧನೆಯನ್ನು ಮಾಡಬಹುದು ಹಾಗೂ ನಮ್ಮ ನಾಡಿನ ಕಲೆಯಾದ ಯಕ್ಷಗಾನ ಕಲೆಯನ್ನು ನಿಂತ ನೀರಂತೆ ಆಗಲೂ ಬಿಡಬಾರದು ಎಂದು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಸ್ಥಾಪಕ ಅಧ್ಯಕ್ಷ ನಾಮದೇವ ರಾವ್ ಅವರು ಹೇಳಿದರು.
ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಮತ್ತು ದೇಶಭಕ್ತಿಗೀತೆ, ಭಾಷಣ ಸ್ಪರ್ಧೆ, ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಪ್ರಧಾನ ಅತಿಥಿಯಾಗಿ ಮಾತನಾಡಿದ ಅವರು, ರಕ್ಷಿತ್ ಶಿವರಾಮ್ ಹುಟ್ಟಿದ್ದು ಬೆಳ್ತಂಗಡಿಯಲ್ಲೇ,ಅವರನ್ನೂ ಎಲ್ಲಿಯೋ ಬೇರೆಯವರು ಎಂದು ಹೇಳಬೇಕಿಲ್ಲ. ತಮ್ಮ ಉದ್ಯಮದ ಕಾರಣಕ್ಕೆ ಅವರು ಬೆಂಗಳೂರಿನಲ್ಲಿದ್ದು ತಮ್ಮ ಸಂಪಾದನೆಯಲ್ಲಿ ಒಂದಂಶವನ್ನು ತನ್ನ ಹುಟ್ಟೂರಿಗೆ ನೀಡಬೇಕೆಂಬ ಉದ್ದೇಶದಿಂದ ಬೆಸ್ಟ್ ಫೌಂಡೇಶನ್ ಕಟ್ಟಿಕೊಂಡಿದ್ದಾರೆ. ತರಬೇತಿ ಶಾಲೆಯನ್ನು ಪ್ರಾರಂಭಿಸಿ ಕಲಾಕುಸುಮಗಳ ಹುಡುಕಾಟ ಆರಂಭಿಸಿರುವುದು ಅಭಿನಂದನಾರ್ಹ ಎಂದರು.
ಖ್ಯಾತ ಕಲಾವಿದರು, ಸಮಾಜ ಸೇವಕರೂ ಆಗಿರುವ ರವಿ ಕಟಪಾಡಿ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ನಾವು ನಮಗಿಂತ ಮೇಲಿನವರನ್ನು ಅನುಸರಿಸದೆ ಕೆಳಮಟ್ಟದಲ್ಲಿರುವವ ಬಗ್ಗೆ ಆಲೋಚನೆ ಮಾಡಬೇಕು. ನಮ್ಮ ಆದಾಯ ಎಷ್ಟಿದೆ ಎಂದು ಹೇಳುವುದಕ್ಕಿಂತ ನಮ್ಮ ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಅಭಿಮಾನಪಟ್ಟುಕೊಳ್ಳಬೇಕು. ನಮ್ಮ ಜೀವನದಲ್ಲಿ ಕೊನೆಗೆ ಉಳಿಯುವಂತದ್ದು ಜನರ ಪ್ರೀತಿ ವಿಶ್ವಾಸ ಮಾತ್ರ. ಆದ್ದರಿಂದ ನಾನು ಕಲಾವಿದನಾಗಿ ಇದುವರೆಗೆ ತಮ್ಮ ತಂಡದಲ್ಲಿರುವ 71ಮಂದಿಯ ಸೇರುವಿಕೆಯಿಂದ 41 ಮಂದಿ ಅರ್ಹರಿಗೆ 80 ಲಕ್ಷ ರೂ.ಗಳ ನೆರವು ನೀಡಲು ಸಾಧ್ಯವಾಗಿದೆ ಎಂದರು.
ಕೊರೋನಾ ಸಂದರ್ಭದಲ್ಲಿ ನನ್ನ ಊರಿನ ಜನ ಸಂಕಷ್ಟದಲ್ಲಿದ್ದಾರೆ ಎಂದು ತಿಳಿದು ಈ ತಾಲೂಕಿನಲ್ಲಿ ಏನಾದರೂ ಕೆಲಸ ಮಾಡಬೇಕೆಂದು ನಿರ್ಧರಿಸಿದೆ. ತಾಲೂಕಿನಲ್ಲಿ 81 ಗ್ರಾಮಗಳ ಪೈಕಿ ಈಗಾಗಲೇ 70 ಗ್ರಾಮಗಳನ್ನು ನಾನು ಸುತ್ತಾಡಿದ್ದು ಇಲ್ಲಿಯ ಜನರ ಬದುಕಿನ ಬವಣೆ ಅರ್ಥಮಾಡಿಕೊಂಡಿದ್ದೇನೆ. ಈ ತಾಲೂಕಿನಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ತಯಾರು ಮಾಡುವ ತರಬೇತಿ ಆರಂಭಿಸಲಿದ್ದೇವೆ.ಇಚ್ಛಾ ಶಕ್ತಿ ಇರುವವರು ನೊಂದಾಯಿಸಿಕೊಳ್ಳಿ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ಹೇಳಿದರು.
ಚಿನ್ಮಯಿ ಜಿ.ಕೆ ಪ್ರಾರ್ಥನೆ ಹಾಡಿದರು. ಅಂಜನಿ ಅನಿಲ್ ಪೈ ಸ್ವಾಗತಿಸಿದರು. ವಿಜಯ್ ಗೌಡ ಅತ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ಗುರಿಪಳ್ಳ ಧನ್ಯವಾದವಿತ್ತರು.