ಬೆಂಗಳೂರು: ನಿನ್ನೆ ವಿಧಿವಶರಾದ ನಟ ಚಿರಂಜೀವಿ ಸರ್ಜಾರ ಅಂತ್ಯಕ್ರಿಯೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ತಮ್ಮ ಕುಟುಂಬದ ಮೂಲ ಮನೆಯ ಜಾಗದಲ್ಲಿ ನಡೆಯಲಿದೆ ಎಂದು ನಿಗದಿ ಪಡಿಸಲಾಗಿತ್ತು. ಆದರೆ ಇಂದು ಅಣ್ಣನ ನೆನಪು ಸದಾ ನನ್ನ ಜೊತೆ ಇರಬೇಕು ಎನ್ನುವ ದೃಷ್ಟಿಯಿಂದ ತಮ್ಮ ಧ್ರುವ ಸರ್ಜಾ, ಕನಕಪುರ ಸಮೀಪದ ನೆಲಗುಳಿಯಲ್ಲಿರುವ ತನ್ನ ಫಾರ್ಮ್ ನಲ್ಲಿ ಅಣ್ಣ ಚಿರು ಸರ್ಜಾರ ಅಂತ್ಯಕ್ರಿಯೆ ನಡೆಸಲು ಸೋದರ ಮಾವ ಅರ್ಜುನ್ ಸರ್ಜಾರ ಬಳಿ ಮನವಿ ಮಾಡಿಕೊಂಡಿದ್ದಾರೆ.
ನೆಲಗುಳಿಯಲ್ಲಿರುವ ತನ್ನ ಫಾರ್ಮ್ ನಲ್ಲಿ ವಿಶಾಲವಾದ ಜಾಗದ ಮಧ್ಯೆ ಗುಂಡಿಯನ್ನು ತೆಗೆಯಲಾಗುತ್ತಿದೆ. ಅಂತ್ಯಕ್ರಿಯೆ ಸ್ಥಳದಲ್ಲಿ ಪೆಂಡಾಲ್, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ಸ್ಥಳಕ್ಕೆ ಎಲ್ಲರಿಗೂ ಅವಕಾಶ ನೀಡದೆ ಕೆಲವರಿಗೆ ಮಾತ್ರ ಅವಕಾಶ ನೀಡಲಾಗುವುದು. ಸಿನಿಮಾ ರಂಗದ ಗಣ್ಯರು, ಕುಟುಂಬದವರು ಹೊರತುಪಡಿಸಿ ಉಳಿದವರಿಗೆ ಅವಕಾಶ ಇರುವುದಿಲ್ಲ ಎನ್ನಲಾಗಿದೆ.
ಬೆಂಗಳೂರಿನ ನಿವಾಸದಲ್ಲಿ ಅಂತಿಮ ದರ್ಶನದ ನಂತರ ಮಧ್ಯಾಹ್ನ ಧ್ರುವ ಸರ್ಜಾ ಫಾರ್ಮ್ ಗೆ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುವುದು.