ಚಿಕ್ಕಮಗಳೂರು ; ಬಸ್ ನಿಂದ ಬಿದ್ದು ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡಿದ್ದ ಚಿಕ್ಕಮಗಳೂರಿನ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡದ ವಿದ್ಯಾರ್ಥಿನಿ ರಕ್ಷಿತಾಳ ಅಂಗಾಂಗವನ್ನು ದಾನ ಮಾಡಲಾಗಿದೆ.
ಇಂದು ರಕ್ಷಿತಾಳ ಹೃದಯವನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಯಿತು. ಹೃದಯವನ್ನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಗಿದೆ. ಈ ಮೂಲಕ ಮಗಳ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ರಕ್ಷಿತಾ. ಚಿಕ್ಕಮಗಳೂರು ನಗರದ ಬಸವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮೊನ್ನೆ ಮನೆಗೆ ಹಿಂದಿರುವಾಗ ಬಸ್ಸಿನಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡಿದ್ದ ರಕ್ಷಿತಾಳನ್ನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ರು. ಆದರೆ ರಕ್ಷಿತಾಳ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಬದುಕಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ರಕ್ಷಿತಾಳ ಬೇರೆಲ್ಲಾ ಅಂಗಾಂಗಗಳಿಗೆ ಯಾವುದೇ ತೊಂದರೆಯಾಗದ ಹಿನ್ನೆಲೆಯಲ್ಲಿ ಅವುಗಳ ದಾನಕ್ಕೆ ಮುಂದಾಗಬಹುದು ಎಂದು ವೈದ್ಯರು ರಕ್ಷಿತ ಕುಟುಂಬಕ್ಕೆ ಮಾಹಿತಿ ನೀಡಿದ್ದರು.
ಅದರಂತೆ ರಕ್ಷಿತಾಳ ಪೋಷಕರಾದ ಲಕ್ಷ್ಮಿ ಬಾಯಿ, ಶೇಖರ್ ನಾಯ್ಕ್ ಮಗಳ ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಆಕೆಯ ಎರಡು ಕಣ್ಣುಗಳು, ಹೃದಯ, ಎರಡು ಕಿಡ್ನಿಗಳು, ಎರಡು ಶ್ವಾಸಕೋಶಗಳ ನು ದಾನ ಮಾಡಲಾಗಿದ್ದು., ಇದು ಒಂಭತ್ತು ಮಂದಿಗೆ ಹೊಸ ಬದುಕು ನೀಡಿದೆ.