ಮಂಗಳೂರು: ಒಂದು ಕೋಟಿ ರೂ. ಸಾಲ ನೀಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಮಂಗಳೂರು ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೊಬ್ಬರು ಸ್ವಂತ ವ್ಯವಹಾರ ನಡೆಸುವ ಸಲುವಾಗಿ ಗೂಗಲ್ನಲ್ಲಿ ಸಾಲಕ್ಕಾಗಿ ಹುಡುಕಾಟ ನಡೆಸಿದ್ದರು.ಬಳಿಕ ಅವರಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ತಾನು ಕ್ರಾಂತಿ ಫೈನಾನ್ಸ್ ಎಂಬ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ.
ಸ್ವಂತ ವ್ಯವಹಾರ ಮಾಡಲು ಒಂದು ಕೋಟಿ ರೂಪಾಯಿ ಸಾಲ ಒದಗಿಸುವುದಾಗಿ ನಂಬಿಸಿ ಆತನ ಕಂಪೆನಿಯ ಕೆಲವು ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದ. ಅನಂತರ ಸಾಲ ಒದಗಿಸಲು ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ದೂರುದಾರರಿಗೆ ತಿಳಿಸಿದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಾಹಿತಿ ನೀಡಲಾಗಿದೆ.
ಮೊದಲಿಗೆ 12,500 ರೂ. ಪಾವತಿಸಲು ಹೇಳಿದ್ದ. ಅದರಂತೆ ದೂರುದಾರ ಹಣ ಪಾವತಿಸಿದರು. ಅನಂತರವೂ ಹಣ ಪಾವತಿಸುವಂತೆ ಅಪರಿಚಿತ ವ್ಯಕ್ತಿ ಹೇಳಿ ಹಂತ ಹಂತವಾಗಿ 2022ರ ಡಿ.29ರಿಂದ ಜ.19ರ ಅವಧಿಯಲ್ಲಿ ಒಟ್ಟು 10,14,106 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾನೆ. ಆದರೆ ಯಾವುದೇ ಹಣ ವಾಪಸ್ ನೀಡದೆ ವಂಚಿಸಿದ್ದಾನೆ ಎಂದು ಸೆನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.