ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ಪಾಸ್ ಅನ್ನು ಮಾರ್ಚ್ ವರೆಗೆ, ಇನ್ನೂ ಕೆಲ ವಿದ್ಯಾರ್ಥಿಗಳಿಗೆ ಏಪ್ರಿಲ್ 2023ರವರೆಗೆ ನೀಡಲಾಗಿತ್ತು. ಹೀಗಾಗಿ ಜೂನ್ ನಲ್ಲಿ ನಿಗದಿಪಡಿಸಿರುವಂತ ಪರೀಕ್ಷೆಗೆ ಹಾಜರಾಗಲು ತೊಂದರೆಯುಂಟಾಗಿತ್ತು.ಇಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಲಾಗಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2022-23ನೇ ಸಾಲಿನ ಮಾರ್ಚ್ 2023ರವರೆಗೆ ಬಸ್ ಪಾಸ್ ಪಡೆದಿರುವ ಪದವಿ, ಸ್ನಾತಕೋತ್ತರ, ಡಿಪ್ಲೋಮಾ, ಬಿ.ಫಾರ್ಮ್ ಹಾಗೂ ಮುಂತಾದ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಜುಲೈ 2023ರ ಅಂತ್ಯದವರೆಗೂ ಪರೀಕ್ಷೆ ಇದೆ. ಈ ಕಾರಣದಿಂದ ಒಂದು ಅಥವಾ ಎರಡು ತಿಂಗಳ ಅವಧಿಗೆ ತರಗತಿಗಳು ನಡೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು, ನಿಯಮಾನುಸಾರ ಹಣ ಪಾವತಿಸಿಕೊಂಡು ರಶೀದಿ ಪಡೆದು, ಬಸ್ ಪಾಸ್ ಅವಧಿಯನ್ನು ವಿಸ್ತರಿಸಿ, ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದೆ.
ಇನ್ನೂ ಕೆಲವು ಕೋರ್ಸ್ ಗಳ ವಿದ್ಯಾರ್ಥಿಗಳ ಪಾಸುಗಳು ಏಪ್ರಿಲ್ 2023ರವರೆಗೆ ಇರುತ್ತದೆ. ಬಸ್ ಪಾಸ್ ಅವಧಿಯನ್ನು ವಿಸ್ತರಿಸುವಂತೆ ಬೇಡಿಕೆ ಸಲ್ಲಿಸುತ್ತಿರುವುದರಿಂದ, ಪರೀಕ್ಷಾ ವೇಳಾಪಟ್ಟಿಯನ್ನು ಖಚಿತಪಡಿಸಿಕೊಂಡು ಹಣಪಾವತಿಸಿಕೊಂಡು, ರಶೀದಿ ನೀಡಿ ಬಸ್ ಪಾಸ್ ಅವಧಿಯನ್ನು ವಿಶೇಷವಾಗಿ ಒಂದು, ಎರಡು ತಿಂಗಳ ಅವಧಿಗೆ ವಿಸ್ತರಿಸುವಂತೆ ತಿಳಿಸಿದ್ದಾರೆ.ವಿದ್ಯಾರ್ಥಿಗಳು ಪ್ರಯಾಣಿಸುವಾಗ ಶುಲ್ಕ ಪಾವತಿ ರಶೀದಿ ಮತ್ತು 2022-23ನೇ ಸಾಲಿನ ಬಸ್ ಪಾಸ್ ಎರಡನ್ನೂ ತೋರಿಸಿ ಸಾರಿಗೆ ಬಸ್ ನಲ್ಲಿ ಪ್ರಯಾಣಿಸಬಹುದು ಎಂದು ಹೇಳಿದೆ.