ಅಬುದಾಭಿ: ಅಬುದಾಬಿಯಲ್ಲಿ ಮರಣದಂಡನೆಗೊಳಗಾಗಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಉದ್ಯಮಿಯೊಬ್ಬರು ಬೆನ್ನಿಗೆ ನಿಂತು ಜೀವದಾನ ಮಾಡಿದ್ದಾರೆ. ಕೇರಳದ ಬೆಕ್ಸ್ ಕೃಷ್ಣನ್ ಅವರಿಗೆ ಉದ್ಯಮಿ ಎಂ.ಎ.ಯೂಸುಫ್ ಅಲಿ ಜೀವದಾನ ಮಾಡಿದ್ದಾರೆ.
2012ರಲ್ಲಿ ಬೆಕ್ಸ್ ಕೃಷ್ಣನ್ ಅವರು ಬೇಕಾಬಿಟ್ಟಿ ಕಾರು ಚಲಾಯಿಸಿದ್ದರಿಂದ ಸೂಡಾನ್ನ ಬಾಲಕ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಅವರಿಗೆ ಯುಎಇ ಸುಪ್ರೀಂ ಕೋರ್ಟ್ ಮರಣದಂಡನೆ ವಿಧಿಸಿತ್ತು. ಕೃಷ್ಣನ್ ಕುಟುಂಬ ಖ್ಯಾತ ಉದ್ಯಮಿ, ಲುಲು ಗ್ರೂಪ್ ಮುಖ್ಯಸ್ಥ ಎಂ.ಎ.ಯೂಸುಫ್ ಅಲಿ ಅವರಿಗೆ ಪರಿಸ್ಥಿತಿಯನ್ನು ವಿವರಿಸಿತ್ತು. ಅದರಂತೆ 1 ಕೋಟಿ ರೂ. ಪರಿಹಾರ ನೀಡಿ ಅಲಿ ರಕ್ಷಿಸಿದ್ದಾರೆ.
ಬಾಲಕನ ಕುಟುಂಬವನ್ನು ಸುಡಾನ್ನಿಂದ ಕರೆಯಿಸಿಕೊಂಡು ಕುಟುಂಬಕ್ಕೆ ಅಲಿ, ತಾವೇ 1 ಕೋಟಿ ರೂ. ಪರಿಹಾರಧನ ನೀಡಿದ್ದಾರೆ. ಬಳಿಕ ಕುಟುಂಬ ಕೃಷ್ಣನ್ರನ್ನು ಕ್ಷಮಿಸಲು ಒಪ್ಪಿತು. ಸುಪ್ರೀಂ ಕೋರ್ಟ್ ಕೂಡ ಕೃಷ್ಣನ್ ಅವರನ್ನು ಬಿಡುಗಡೆ ಮಾಡಿದೆ. 9 ವರ್ಷಗಳ ಅನಂತರ ಕೃಷ್ಣನ್ ಜೈಲಿನಿಂದ ಸದ್ಯದಲ್ಲೇ ಹೊರಬರಲಿದ್ದಾರೆ. ಒಮ್ಮೆ ಯೂಸುಫ್ ಅಲಿಯನ್ನು ನೋಡಿ, ಕೇರಳಕ್ಕೆ ಬರುವುದು ಕೃಷ್ಣನ್ ಅವರ ಮುಂದಿನ ಗುರಿ.