ಮೂಡುಬಿದ್ರೆ: ಪುತ್ತಿಗೆ ಗ್ರಾಮದ ಸಬ್ ಸ್ಟೇಷನ್ ಬಳಿ ನಿವಾಸಿ ಶೇಕ್ ಮುಬೀನ್ ಮತ್ತು ಸಲ್ಮಾ ಬಾನು ದಂಪತಿಯ 8 ವರ್ಷದ ಪುತ್ರನ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ಕಾಂಗ್ರೆಸ್ ನ ಯುವ ನಾಯಕ ಮಿಥುನ್ ರೈ ನೆರವಾಗಿದ್ದಾರೆ.
ಶೇಕ್ ಮುಬೀನ್ ರ ಪುತ್ರ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು, ಇದರ ಚಿಕಿತ್ಸೆಯ ನಂತರ ಮಗುವಿನ ದೈಹಿಕ ಬೆಳವಣಿಗೆ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಮಗುವಿಗೆ ಮುಂದಿನ 12 ತಿಂಗಳ ಕಾಲ ತಲಾ 15,000 ರೂ. ಮೌಲ್ಯದ ಚುಚ್ಚುಮದ್ದು ನೀಡುವುದು ಅನಿವಾರ್ಯ ಎಂದು ಸೂಚಿಸಿದ್ದಾರೆ. ಇದರಿಂದ ಆ ಬಡ ಕುಟುಂಬ ಬಹಳಷ್ಟು ಸಂಕಷ್ಟಕ್ಕೀಡಾಗಿತ್ತು. ಇದನ್ನು ಅರಿತ ಮಿಥುನ್ ರೈ 15,000 ರೂ. ಮೌಲ್ಯದ ಚುಚ್ಚುಮದ್ದನ್ನು ಆ ಮಗುವಿನ ಮನೆಗೆ ತಂದೊಪ್ಪಿಸಿದ್ದಾರೆ. ಅಲ್ಲದೆ ಮಗುವಿನ ಮುಂದಿನ ಚಿಕಿತ್ಸೆಗೆ ನೆರವಾಗುವ ಭರವಸೆ ನೀಡಿ ಮಗುವಿನ ಪೋಷಕರಿಗೆ ಧೈರ್ಯ ತುಂಬಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ವಲೇರಿಯನ್ ಸಿಕ್ವೇರ, ರಾಜೇಶ್ ಕಡಲಕೆರೆ, ಚಂದ್ರಹಾಸ್ ಸನಿಲ್, ಜಯಕುಮಾರ್ ಶೆಟ್ಟಿ, ವಾಸುದೇವ ನಾಯಕ್, ನಿತಿನ್ ಬೆಳುವಾಯಿ, ಮುಹಮ್ಮದ್ ಶರೀಫ್, ಸುದೀಶ್ ಪುತ್ತಿಗೆ, ಲತೀಫ್, ಶಬೀರ್, ಪುರುಷೋತ್ತಮ್ ನಾಯಕ್, ಸುರೇಶ್ ಕೋಟ್ಯಾನ್, ಸುಂದರ ಸಿ. ಪೂಜಾರಿ, ಕುಮಾರ್ ಪೂಜಾರಿ ಉಪಸ್ಥಿತರಿದ್ದರು.