ಚಿತ್ರದುರ್ಗ: ಖಾಸಗಿ ಬಸ್ವೊಂದು ಬೆಂಕಿಗಾಹುತಿಯಾಗಿ, ಐವರು ಸಜೀವ ದಹನವಾದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ನಡೆದಿದೆ. ಕೆಎ 51- ಎಡಿ 7449 ಕುಕ್ಕೆ ಶ್ರೀ ಟ್ರಾವಲ್ಸ್ ಎಂಬ ಖಾಸಗಿ ಬಸ್ ಬಿಜಾಪುರದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಈ ಘಟನೆ ನಡೆದಿದೆ.
ಮೃತರ ಗುರುತು ಪತ್ತೆಯಾಗಿಲ್ಲ. ಬೆಂಕಿಯ ತೀವ್ರತೆಗೆ ಬಸ್ ಸಂಪೂರ್ಣವಾಗಿ ಸುಟ್ಟ ಕರಕಲಾಗಿದ್ದು, ಸುಮಾರು 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಹಿರಿಯೂರು ಮತ್ತು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಚಾಲಕನ ಅಜಾಗರೂಕತೆಯಿಂದಾಗಿ ಈ ದುರಂತ ನಡೆದಿದೆ ಎನ್ನಲಾಗಿದೆ. ವಿಜಯಪುರದಿಂದ ಹೊರಟ ಚಾಲಕ ಎಲ್ಲೂ ಬಸ್ ನಿಲ್ಲಿಸದೇ ನಿರಂತರ ಸಂಚಾರ ಮಾಡಿದ್ದಾನೆ. ಪ್ರಯಾಣಿಕರು ನಿಲ್ಲಿಸುವಂತೆ ಮನವಿ ಮಾಡಿದ್ರು ಕ್ಯಾರೆ ಎಂದಿಲ್ಲ. ನಿರಂತರ ಪ್ರಯಾಣದ ಹಿನ್ನೆಲೆ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿದಾಗ ಜನ ಕೂಗಿದರೂ ಚಾಲಕ ನಿರ್ಲಕ್ಷ್ಯದಿಂದ ಸಾಗಿದ್ದ. ಬೆಂಕಿ ಹೆಚ್ಚಾದಾಗ ಎಚ್ಚೆತ್ತುಕೊಂಡು ಬಸ್ನಿಂದ ಹಾರಿ ಎಸ್ಕೇಪ್ ಆಗಿದ್ದಾನೆ ಅಂತ ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.