ಕಾಸರಗೋಡು ಅಣ್ಣ-ತಂಗಿಯರ ಬಂಧ ಪವಿತ್ರ ಎನ್ನುವ ಮಾತಿದೆ. ಈ ಪವಿತ್ರ ಬಂಧದ ಮಹತ್ವ ಸಾರುವ ಸಲಯವಾಗಿಯೇ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಪ್ರೀತಿಯ ಅಣ್ಣನಿಗೆ ತಂಗಿ ರಾಖಿ ಕಟ್ಟುತ್ತಾಳೆ. ಇದು ಕೇವಲ ದಾರ ಮಾತ್ರವಲ್ಲ. ರಕ್ಷೆಯ ಸಂಕೇತ ಎಂದು ಹೇಳಲಾಗುತ್ತದೆ. ಅಣ್ಣ-ತಂಗಿಯರ ಬಾಂಧವ್ಯ ಅಮೋಘವಾದದ್ದು. ಅಣ್ಣನೂ ಕೂಡ ತನ್ನ ತಂಗಿಗೆ ರಕ್ಷೆಯಾಗಿರುತ್ತಾನೆ. ಆದರೆ ಕೇರಳದಲ್ಲಿಇದಕ್ಕೆ ತದ್ವಿರುದ್ದವಾದ ಘಟನೆ ನಡೆದಿದೆ. ತಂಗಿಯ ರಕ್ಷಕನಾಗಿರಬೇಕಾದವನು ಆಕೆಯ ಪಾಲಿಗೆ ಯಮಧೂತನಾಗಿದ್ದಾನೆ.
ಹೌದು, ಅಣ್ಣನೇ ಐಸ್ಕ್ರೀಂನಲ್ಲಿ ವಿಷ ಬೆರೆಸಿ ತನ್ನ ತಂಗಿಗೆ ತಿನ್ನಿಸಿ ಸಾಯಿಸಿರುವ ಘಟನೆ ನಡೆದಿದೆ. ತನ್ನ ಅಣ್ಣ ಪ್ರೀತಿಯಿಂದ ಐಸ್ಕ್ರೀಂ ತಂದುಕೊಟ್ಟಿದ್ದಾನೆ ಎಂದು ತಿಂದ ಮುಗ್ಧ ತಂಗಿ ಸಾವಿನ ಮನೆಗೆ ಹೋಗಿದ್ದಾಳೆ. ಸದ್ಯ ಆರೋಪಿಯನ್ನು ಕಾಸರಗೋಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತ ಒಂಟಿಯಾಗಿ ಬದುಕಲು ಬಯಸಿದ್ದ. ಹೀಗಾಗಿ ಐಸ್ಕ್ರೀಂನಲ್ಲಿ ವಿಷ ಬೆರೆಸಿ ಅದನ್ನು ತನ್ನ ತಂಗಿ ಹಾಗೂ ತಂದೆ-ತಾಯಿಗೆ ತಿನ್ನಿಸಿದ್ದಾನೆ. ಈ ಘಟನೆ ಆಗಸ್ಟ್ 4ರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
16 ವರ್ಷದ ತನ್ನ ತಂಗಿ ಆನ್ ಮೇರಿಯನ್ನು ಆಗಸ್ಟ್ 5ರಂದು ಆರೋಪಿ ಆಲ್ಬಿನ್ ಕೊಲೆ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಆಲ್ಬಿನ್ ಐಸ್ಕ್ರೀಂನಲ್ಲಿ ವಿಷ ಬೆರೆಸಿ ತನ್ನ ತಂಗಿಯ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನ್ನು, ಅವರ ತಂದೆ-ತಾಯಿಗೂ ವಿಷವುಣಿಸಿದ್ದು, ತಂದೆ ಬೆನ್ನಿಯನ್ನು ಮೇರಿಯ ಜೊತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ತಂದೆ ಬೆನ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ತಾಯಿಯನ್ನು ಆಸ್ಪತ್ರೆಗೆ ಸೇರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.