ಕೋಲ್ಕತ್ತ: ಪಶ್ಚಿಮ ಬಂಗಾಳದ ಅಲಿಪುರ್ದೌರ್ ಜಿಲ್ಲೆಯ ಕಲ್ಚಿನಿ ಪ್ರದೇಶದಲ್ಲಿನ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ನಸೀಮಾ ಅನ್ಸಾರಿ ಎಂಬಾಕೆಯ ಮನೆಗೆ ಸೋಮವಾರ ಆನೆಯೊಂದು ನುಗ್ಗಿತ್ತು. ತಗಡಿನ ಗೋಡೆಯಿರುವ ಪುಟ್ಟ ಮನೆಯ ಒಂದು ಕೋಣೆಯಲ್ಲಿ ಆಕೆ ಮತ್ತು ಮೂರು ಮಕ್ಕಳು ನಿದ್ರಿಸುತ್ತಿದ್ದು, ಆಕೆಯ ಗಂಡ ಪಕ್ಕದ ಕೋಣೆಯಲ್ಲಿ ಮಲಗಿದ್ದರು.
ಮಧ್ಯರಾತ್ರಿ ಗೋಡೆ ಒಡೆದ ಸದ್ದು ಕೇಳಿ ಎಚ್ಚೆತ್ತ ನಸೀಮಾ ಕಂಡದ್ದು ಆನೆಯೊಂದು ಗೋಡೆ ಬಳಿ ನಿಂತಿದೆ. ಏನು ಮಾಡಬೇಕು ಎಂದು ತಿಳಿಯದೆ ಅತ್ತ ನೋಡಿದಾಗ ತನ್ನ ಇಬ್ಬರು ಮಕ್ಕಳನ್ನು ಆನೆ ಸೊಂಡಿಲಿನಿಂದ ಹಿಡಿದು ಕೊಂಡಿತ್ತು. ಮಕ್ಕಳು ಹೆದರಿ ಕಂಗಾಲಾಗಿದ್ದರು. ತಕ್ಷಣವೇ ಅಪಾಯ ಅರಿತ ನಸೀಮಾ ಆನೆಯ ಸೊಂಡಿಲನ್ನು ಗಟ್ಟಿಯಾಗಿ ಗೋಡೆಗೆ ಒತ್ತಿ ಹಿಡಿದರು. ತಗಡಿನ ಗೋಡೆಯಾಗಿದ್ದರಿಂದ ಅದರ ಅಂಚು ಸೊಂಡಿಲಿಗೆ ತಾಗಿದ ಕೂಡಲೇ ಆನೆ ಹಿಡಿತ ಸಡಿಲಿಸಿತು. ತಕ್ಷಣವೇ ಆ ತಾಯಿ ತನ್ನ ಮಕ್ಕಳನ್ನು ಆನೆಯ ಹಿಡಿತದಿಂದ ಬಿಡಿಸಿ ಕಾಪಾಡಿದರು.
ಇಷ್ಟಕ್ಕೆ ಮುಗಿಯಲಿಲ್ಲ. ಸಿಟ್ಟುಗೊಂಡ ಆನೆ ಮನೆಯ ಚಾವಣಿಯನ್ನು ಮುರಿದು ಮನೆಯೊಳಗೆ ತಲೆ ಹಾಕಿತು. ಭಯದಿಂದ ತತ್ತರಿಸಿದ ನಸೀಮಾ ಆನೆಗೆ ಹಸಿವಾಗಿರಬಹುದೆಂದು ಊಹಿಸಿ ಮನೆಯಲ್ಲಿದ್ದ ಗೋಧಿ ಚೀಲವನ್ನು ಆನೆಯ ಮುಂದಿಟ್ಟರು. ಆನೆ ಆ ಚೀಲವನ್ನು ಸೊಂಡಿಲಿನಿಂದ ಹಿಡಿದು ಕಾಡಿನತ್ತ ಹೋಯಿತು.