ಬೆಂಗಳೂರು : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ರಾತ್ರೋರಾತ್ರಿ ನಡೆದ ಗಲಭೆಗೆ ಕಾರಣವಾದ ಫೇಸ್ ಬುಕ್ ನಲ್ಲಿ ಧಾರ್ಮಿಕ ನಿಂದನೆಯ ಪೋಸ್ಟ್ ಹಾಕಿದ್ದು ನಾನೇ ಎಂದು ನವೀನ್ ವಿಚಾರಣೆಯ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ.
ಮುಸ್ಲಿಂ ಸಮುದಾಯದ ಧಾರ್ಮಿಕ ನಿಂದನೆ ಕುರಿತು ವಿಚಾರಣೆ ನಡೆಸುತ್ತಿರುವ ಪೊಲೀಸರು ಗುರುವಾರ ನವೀನ್ ನನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದು, ಗಲಭೆಗೆ ಕಾರಣವಾದ ಪೋಸ್ಟ್ ಮಾಡಿದ್ದು ನಾನೇ. ಮತ್ತು ಅದಕ್ಕೆ ಕಮೆಂಟ್ ಕೂಡ ಮಾಡಿದ್ದೆ. ಆದರೆ ಈ ರೀತಿ ಗಲಭೆ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾನೆ.
ಆರಂಭದಲ್ಲಿ ನನ್ನ ಮೊಬೈಲ್ ಕಳೆದು ಹೋಗಿದ್ದು, ನನ್ನ ಫೇಸ್ ಬುಕ್ ಅನ್ನು ಹ್ಯಾಕ್ ಮಾಡಲಾಗಿದ್ದು, ನಾನು ಫೇಸ್ ಬುಕ್ ನಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ ಎಂದು ವಾದ ಮಾಡುತ್ತಿದ್ದ ಶಾಸಕ ಅಖಂಡ ಶ್ರೀನಿವಾನ ಮೂರ್ತಿ ಅವರ ಮಾಜಿ ಆಪ್ತ ನವೀನ್, ಇದೀಗ ತಪ್ಪು ಒಪ್ಪಿಕೊಳ್ಳುವ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.
ಗಲಭೆ ನಡೆದ ದಿನ ಸಂಜೆ 7 ಗಂಟೆ ಸುಮಾರಿಗೆ ಪೋಸ್ಟ್ ಮಾಡಿದ್ದು, ರಾತ್ರಿ 8 ಗಂಟೆಗೆ ಪೋಸ್ಟ್ ಡಿಲಿಟ್ ಮಾಡಿದ್ದೆ ಎಂದು ನವೀನ್ ಹೇಳಿದ್ದು, ಕಳೆದು ಹೋಗಿರುವ ನವೀನ್ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೊಬೈಲ್ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.


