ಮಡಿಕೇರಿ: ಇಂದು ಮಡಿಕೇರಿಯಲ್ಲಿ ಮದುವೆ ಮುಹೂರ್ತ ಮುಗಿಸಿ ವಧುವೊಬ್ಬರು ಕಲ್ಯಾಣ ಮಂಟಪದಿಂದ ನೇರವಾಗಿ ಮಡಿಕೇರಿಯ ಜ್ಯೂನಿಯರ್ ಕಾಲೇಜಿಗೆ ಬಂದು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆ.
ಅಶೋಕಪುರ ನಿವಾಸಿ ಸ್ವಾತಿ ಅವರೇ ಪರೀಕ್ಷೆ ಬರೆದ ವಧು. ವಿವಾಹ ದಿನಾಂಕಕ್ಕೂ ಮೊದಲೇ ಡಿಸಿಸಿ ಬ್ಯಾಂಕ್ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ ಸ್ವಾತಿ ಅವರಿಗೆ ಸುಂಟಿಕೊಪ್ಪದ ಮಧುರಮ್ಮ ಪಟ್ಟಣದ ಸುರೇಶ್ ಅವರೊಂದಿಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಮದುವೆ ನಿಶ್ಚಯವಾಗಿತ್ತು. ಪರೀಕ್ಷಾ ದಿನದಂದೇ ಮುಹೂರ್ತ ನಿಗದಿಯಾಗಿತ್ತು. ಪರೀಕ್ಷೆಗೆ ಅಡ್ಡಿಯಾಗದಂತೆ ಮುಹೂರ್ತದ ಸಮಯ ನಿಗದಿ ಪಡಿಸಲಾಗಿತ್ತು. ಭಾನುವಾರ ಬೆಳಿಗ್ಗೆ 6.30 ಗಂಟೆಯಿಂದ 9 ಗಂಟೆವರೆಗೆ ಶುಭಲಗ್ನದಲ್ಲಿ ಮುಹೂರ್ತದಲ್ಲಿ ಪಾಲ್ಗೊಂಡು ಬಳಿಕ ಸ್ವಾತಿ ಪರೀಕ್ಷೆಗೆ ಬಂದಿದ್ದರು.ಮುಹೂರ್ತ ಉಡುಗೆಯಲ್ಲೇ ಪರಿಕ್ಷಾ ಕೇಂದ್ರಕ್ಕೆ ಹಾಜರಾಗಿದ್ದರು.
ಪರೀಕ್ಷೆಗೆ ಕೆಲವು ತಿಂಗಳಿಂದ ತಯಾರಿ ನಡೆಸಿದ್ದೆ. ಪರೀಕ್ಷೆ ಬರೆಯುವ ಉದ್ದೇಶದಿಂದಲೇ ಮದುವೆ ಶಾಸ್ತ್ರಗಳನ್ನು ಸ್ವಲ್ಪ ಆತುರವಾಗಿಯೇ ಮುಗಿಸಿದ್ದೇವೆ. ಪರೀಕ್ಷೆಯಲ್ಲಿ ಉತ್ತೀರ್ಣಳಾಗುವ ವಿಶ್ವಾಸವಿದೆ ಎಂದು ನವವಧು ಸ್ವಾತಿ ಹೇಳಿದರು.