ಮಂಗಳೂರು: ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಹಾಗೂ ಸಹ ಸವಾರ ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ಮಹಾಕಾಳಿ ಪಡ್ಪು ಕ್ರಾಸ್ ಬಳಿ ಸೋಮವಾರ ನಸುಕಿನ ವೇಳೆ ನಡೆದಿದೆ.
ತೊಕ್ಕೊಟ್ಟು ಅಂಬಿಕಾ ರೋಡ್ ಎಂಬಲ್ಲಿರುವ ವೈನ್ ಆಯಂಡ್ ಡೈನ್ ಬಾರ್ ಮ್ಯಾನೇಜರ್, ಚಿಕ್ಕಮಗಳೂರು ಜಿಲ್ಲೆಯ ನಿವಾಸಿಯಾಗಿರುವ ಪ್ರತಾಪ್ ಶೆಟ್ಟಿ (32) ಮೃತಪಟ್ಟವರು. ಇವರ ಚಿಕ್ಕಮ್ಮನ ಮಗ, ವೈನ್ ಆಯಂಡ್ ಡೈನ್ ಬಾರ್ ಕೌಂಟರ್ ಬಾಯ್ ಆಗಿರುವ ಚಿಕ್ಕಮಗಳೂರು ಜಿಲ್ಲೆಯ ಕಿಗ್ಗ ನಿವಾಸಿ ಅಭಿ ಶೆಟ್ಟಿ(22) ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಾಪ್ ಮತ್ತು ಅಭಿ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಫರಂಗಿಪೇಟೆಯಲ್ಲಿರುವ ಪ್ರತಾಪ್ ಅವರ ಅಣ್ಣನ ಕೊಠಡಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಜಪ್ಪಿನಮೊಗರು ಮಹಾಕಾಳಿ ಪಡ್ಪು ಕ್ರಾಸ್ ಬಳಿ ವೇಗದಲ್ಲಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬೈಕ್ ಬಿದ್ದ ರಭಸಕ್ಕೆ ಸವಾರರಿಬ್ಬರು 50 ಮೀಟರ್ ನಷ್ಟು ದೂರ ಎಸೆಯಲ್ಪಟ್ಟಿದ್ದು ಸವಾರ ಪ್ರತಾಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.