ಪಾಟ್ನಾ: ಕ್ರೂರಿ ಕೊರೋನಾ ಆಘಾತಕ್ಕಿಂತ ಬಿಹಾರದಲ್ಲಿ ಸಿಡಿಲಿನ ಆಘಾತವೇ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಸಿಡಿಲು ಬಡಿದು ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಮತ್ತೆ ಸಿಡಿಲು ಬಡಿದು ಐದು ಜಿಲ್ಲೆಗಳ 13 ಜನರು ಮೃತಪಟ್ಟಿದ್ದಾರೆ.
ಐದು ಜಿಲ್ಲೆಗಳಲ್ಲಿ 13 ಜನ ಮೃತಪಟ್ಟಿದ್ದು, ವೈಶಾಲಿ ಜಿಲ್ಲೆಯಲ್ಲಿ 5 ಸಾವು, ಲಖಿಸರೈನಲ್ಲಿ 2, ಗಯಾ, ಬಂಕಾ, ಸಮಸ್ತಿಪುರ, ನಳಂದ ಮತ್ತು ಜಮುಯಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ತಿಳಿಸಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದು, ಪ್ರತಿ ಮೃತ ವ್ಯಕ್ತಿಯ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜೊತೆಗ ಹವಾಮಾನ ಕೆಟ್ಟದಾಗಿದ್ದರೆ ಜನ ಮನೆಯೊಳಗೆ ಇರಬೇಕೆಂದು ಸಿಎಂ ಮನವಿ ಮಾಡಿದ್ದಾರೆ.
ಇನ್ನು ಸರ್ಕಾರ ನೀಡಿರುವ 4ಲಕ್ಷ ರೂಗಳ ಪರಿಹಾರಕ್ಕೆ ಆರ್ ಜೆಡಿ ವಿರೋಧ ವ್ಯಕ್ತಪಡಿಸಿದ್ದು, ಸಂತ್ರಸ್ಥರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಅವರಿಲ್ಲರಿಗೂ ಕನಿಷ್ಠ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.