ಮಂಗಳೂರು: ನಗರದ ನಂತೂರು ಸರ್ಕಲ್ ಬಳಿ ಗುರುವಾರ ಸಂಜೆ ಭಿನ್ನ ಕೋಮಿನ ಜೋಡಿ ಮೇಲೆ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸುರತ್ಕಲ್ ನಿವಾಸಿ ಮುತ್ತು(18), ಪ್ರಕಾಶ್(21) ಮತ್ತು ಅಸೈಗೋಳಿ ನಿವಾಸಿ ರಾಕೇಶ್(23) ಬಂಧಿತರು.
ಈ ಮೂವರೂ ಭಜರಂಗದಳ ಮತ್ತು ವಿಶ್ವಹಿಂದು ಪರಿಷತ್ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 24ರಂದು ಸಂಜೆ ಕಾರ್ಕಳದ ನಿಟ್ಟೆಯಿಂದ ತನ್ನ ಸಹಪಾಠಿ ಎಂದು ಹೇಳಿಕೊಂಡಿರುವ ಯುವತಿಯ ಜೊತೆಗೆ ಆಗಮಿಸುತ್ತಿದ್ದ ಜೆಪ್ಪು ನಿವಾಸಿ ಸೈಯ್ಯದ್ ರಶೀಮ್ ಗೆ ಹಲ್ಲೆ ನಡೆಸಿತ್ತು. ನಂತೂರು ಸರ್ಕಲ್ ಬಳಿ ಏಕಾಏಕಿ ಆತ ಬರುತ್ತಿದ್ದ ಬಸ್ಸನ್ನು ಅಡ್ಡ ಹಾಕಿ ಒಳನುಗ್ಗಿದ ತಂಡ, ಆತನ ಬಳಿ ಇದ್ದ ಐಡಿ ಕಾರ್ಡ್ ತೋರಿಸಲು ಹೇಳಿ ಬಳಿಕ ಬಸ್ಸಿನಿಂದ ಕೆಳಕ್ಕೆ ಎಳೆದು ಹಾಕಿ ಹಲ್ಲೆ ನಡೆಸಿದ್ದರು.
ಆತನ ಜೊತೆಗೆ ಇದ್ದ ಭಿನ್ನ ಕೋಮಿನ ಯುವತಿಗೂ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದರು. ಅದಲ್ಲದೇ ಆರೋಪಿಗಳು ದೊಣ್ಣೆ, ಬೆತ್ತ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದರು ಎಂದು ಸಂತ್ರಸ್ತ ಯುವಕ ಸೈಯ್ಯದ್ ರಶೀಮ್ ಕದ್ರಿ ಠಾಣೆಗೆ ದೂರು ನೀಡಿದ್ದರು.