ಮಂಗಳೂರು: ಕೇರಳ ಲಾಟರಿಯನ್ನು ವ್ಯಕ್ತಿಯೊಬ್ಬ ಆನ್ ಲೈನ್ ನಲ್ಲಿ ಖರೀದಿಸಿದ್ದು, ವ್ಯಕ್ತಿಗೆ 12 ಲಕ್ಷ ರೂ. ಬಹುಮಾನ ಬಂದಿದೆ ಎಂದು ಯಾಮಾರಿಸಿ ಅನಾಮಿಕ ವ್ಯಕ್ತಿಯೋರ್ವ 1.85 ಲಕ್ಷ ರೂ. ವಂಚಿಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಸುರತ್ಕಲ್ ನಿವಾಸಿಯೊಬ್ಬರು ಫೇಸ್ಬುಕ್ನಲ್ಲಿ ಕೇರಳ ಲಾಟರಿ ಜಾಹೀರಾತು ನೋಡಿ, ನವೀನ್ ಎಂಬಾತನಿಗೆ 100 ರೂ. ಪಾವತಿಸಿ ಎರಡು ಲಾಟರಿ ಟಿಕೆಟ್ ಖರೀದಿಸಿದ್ದು, ಆನಂತರ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಿಮಗೆ 12 ಲಕ್ಷ ರೂ. ಬಹುಮಾನ ಬಂದಿದೆ ಎಂದು ನಂಬಿಸಿ, ವಿವಿಧ ತೆರಿಗೆ ಹಾಗೂ ಪ್ರಕ್ರಿಯಾ ಶುಲ್ಕದ ಹೆಸರಿನಲ್ಲಿ ಹಂತಹಂತವಾಗಿ ಒಟ್ಟು 1,85,636 ರೂ.ಗಳನ್ನು ಗೂಗಲ್ ಪೇ ಮತ್ತು ನೆಫ್ಟ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಇನ್ನು ಹಣ ಕಳೆದುಕೊಂಡ ಸಂತ್ರಸ್ತರು ಜೂನ್ 2ರಂದು ತಿರುವನಂತಪುರದ ಲಾಟರಿ ಕಚೇರಿಗೆ ನೇರವಾಗಿ ಭೇಟಿ ನೀಡಿ ವಿಚಾರಿಸಿದಾಗ ಇದು ನಕಲಿ ಲಾಟರಿ ಎಂಬುದು ಬೆಳಕಿಗೆ ಬಂದಿದ್ದು, ತಮಗೆ ಮೋಸ ಮಾಡಿದ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


