Tuesday, June 9, 2026
Homeಕರಾವಳಿಉಡುಪಿಉಡುಪಿ: ಪಾಪನಾಶಿನಿ ಹೊಳೆಗೆ ಜಾನುವಾರು ಅವಶೇಷ ಎಸೆದಿದ್ದ ಪ್ರಕರಣ:ಆರೋಪಿಯನ್ನು ಬಂಧಿಸಿದ ಪೊಲೀಸರು

ಉಡುಪಿ: ಪಾಪನಾಶಿನಿ ಹೊಳೆಗೆ ಜಾನುವಾರು ಅವಶೇಷ ಎಸೆದಿದ್ದ ಪ್ರಕರಣ:ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಉಡುಪಿ: ಪಾಪನಾಶಿನಿ ಹೊಳೆಗೆ ಜಾನುವಾರು ಅವಶೇಷ ಎಸೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಶಿರ್ವ ಪದವು ಬಬ್ಬು ಸ್ವಾಮಿ ದೈವಸ್ಥಾನದ ಹತ್ತಿರದ ನಿವಾಸಿ ಅಶೋಕ ಕೊರಗ (52) ಬಂಧಿತ ಆರೋಪಿ.


ಜೂನ್ 1 ರಂದು ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳು ತೇಲುತ್ತಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಕಾರ್ಯಪ್ರವೃತ್ತರಾಗಿದ್ದ ಶಿರ್ವ ಪೊಲೀಸರು, ಕಾಪು ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಅಪರಾಧ ಪರಿಶೀಲನಾ ಅಧಿಕಾರಿಗಳ ಸಮಕ್ಷಮದಲ್ಲಿ ಸ್ಥಳ ಮಹಜರು ನಡೆಸಿದ್ದರು. ಈ ವೇಳೆ ಹೊಳೆಯಲ್ಲಿದ್ದ ಜಾನುವಾರಿನ ಮೇಲ್ದವಡೆಯ ಭಾಗ, ಎರಡು ಗೆರಸುಗಳು, ಮಾಂಸ ಹಾಗೂ ಹೊಟ್ಟೆಯ ಒಳಗಿನ ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಕಾನೂನುಬದ್ಧವಾಗಿ ಪ್ರಕರಣ ದಾಖಲಿಸಲಾಗಿತ್ತು.


ಹೊಳೆಗೆ ಜಾನುವಾರು ಅವಶೇಷ ಎಸೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಸಂಘ ಪರಿವಾರದ ವಿವಿಧ ಸಂಘಟನೆಗಳು, ಆರೋಪಿಯನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದ್ದವು. ಅಲ್ಲದೆ, ಪೊಲೀಸರಿಗೆ ಗಡುವು ವಿಧಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದ ಶಿರ್ವ ಪೊಲೀಸರು, ಜೂನ್ 5 ರಂದು ಶಿರ್ವ ಗ್ರಾಮದ ಪದವು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಅಶೋಕನನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತನಿಂದ ಜಾನುವಾರಿನ ಚರ್ಮ ಹಾಗೂ ಕೃತ್ಯ ಎಸಗಲು ಬಳಸಿದ್ದ ಹರಿತವಾದ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

- Advertisement -

Latest News

error: Content is protected !!