ಬಂಟ್ವಾಳ: ತಾಲೂಕಿನ ಕಂದಾಯ ಇಲಾಖೆ ಹಾಗೂ ಗಣಿ ಇಲಾಖೆ ತಂಡವು ತುಂಬೆ, ಮಾರಿಪಳ್ಳ, ಭಾಗದ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಆ.4ರ ಶುಕ್ರವಾರ ದಾಳಿ ನಡೆಸಿದ್ದು, ಒಟ್ಟು 20 ದೋಣಿಗಳನ್ನು ವಶಪಡಿಸಿಕೊಂಡಿದೆ.
ಗಣಿ ಇಲಾಖೆಯ ತಂಡವು ದ.ಕ. ಜಿಲ್ಲಾಧಿಕಾರಿಯ ಆದೇಶದಂತೆ, ಬಂಟ್ವಾಳ ಕಂದಾಯ ಇಲಾಖೆ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ನೆರವು ಪಡೆದು ಅಕ್ರಮ ಮರುಳುಗಾರಿಕೆಯ ಕಾರ್ಯಚರಣೆ ನಡೆಸಿತ್ತು. ದಾಳಿಯ ವೇಳೆ ಸುಮಾರು 20 ದೋಣಿಗಳನ್ನು ವಶಪಡಿಸಿಕೊಂಡು, ಮಂಗಳೂರು ತಾಲೂಕಿನ ಅಡ್ಯಾರಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.
ಇನ್ನು ಗಣಿ ಇಲಾಖೆಯ ತಂಡವು ವಶಪಡಿಸಿಕೊಂಡ ಯಾವುದೇ ದೋಣಿಗಳಲ್ಲಿ ಮರಳು ಪತ್ತೆಯಾಗಿಲ್ಲ. ಜೊತೆಗೆ ದಾಳಿಯ ವೇಳೆ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ, ಹಿರಿಯ ಭೂ ವಿಜ್ಞಾನಿ ಗಿರೀಶ್ ಮೋಹನ್, ಭೂ ವಿಜ್ಞಾನಿ ಮಹಾದೇಶ್ವರ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಮಂಗಳೂರು ಕಂದಾಯ ಇಲಾಖೆಯ ಪ್ರಶಾಂತ್ ಪಾಟೀಲ್, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ದನ, ಗ್ರಾಮಕರಣಿಕರು ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರ ತಂಡ ಭಾಗವಹಿಸಿತ್ತು ಎಂದು ತಿಳಿದು ಬಂದಿದೆ.