ಬೆಂಗಳೂರು; ಜೊತೆ ಜೊತೆಯಲಿ ಧಾರಾವಾಹಿಗೆ ಅನಿರುದ್ಧ ಪಾತ್ರಕ್ಕೆ ಬೇರೆ ಕಲಾವಿದ ಬರೋದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಅನಿರುದ್ಧ್ ಅವರು ಹೊಸ ಪೋಸ್ಟ್ ಹಾಕಿದ್ದಾರೆ. ‘ನನ್ನ ಮೇಲೆ ನಿಮಗಿರುವ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಸಂಘರ್ಷದ ದಿನಗಳಲ್ಲಿ ತಾವು ಸಾವಿರಾರು ಸಂದೇಶ, ಟ್ವೀಟ್, ಕರೆ, ಪತ್ರ, ಪ್ರತಿಭಟನೆ, ಪತ್ರಿಕಾಗೋಷ್ಠಿ, ಪ್ರಾರ್ಥನೆಗಳ ಮೂಲಕ ನನ್ನ ಪರ, ನನ್ನ ಬೆಂಬಲಕ್ಕೆ ನಿಂತಿದ್ದೀರಿ. ಅದಕ್ಕೆ ನಾನು ಚಿರಋುಣಿ’ ಎಂದು ಪತ್ರ ಆರಂಭಿಸಿದ್ದಾರೆ ಅನಿರುದ್ಧ್.
‘ತಮ್ಮ ಪ್ರಯತ್ನಗಳಗೆ ತಾವು ಅಂದುಕೊಂಡಿರೋ ಫಲ ಸಿಗಲಿಲ್ಲ ಅಂತ ದಯವಿಟ್ಟು ನಿರಾಶೆಗೊಳ್ಳಬೇಡಿ. ಅಮಿತಾಭ್ ಬಚ್ಚನ್ ಅವರ ತಂದೆ ಮಹಾನ್ ಕವಿ ಹರಿವಂಶ್ ರಾಯ್ ಬಚ್ಚನ್ ಅವರು ಹೇಳುತ್ತಿದ್ದರು, ‘ಮನ್ ಕಾ ಹುವಾ ತೋ ಅಚ್ಛಾ, ನಾ ಹುವಾ ತೋ ಔರ್ ಭೀ ಅಚ್ಛಾ ಕ್ಯುಂಕೆ ತಬ್ ವೋ ಭಗವಾನ್ ಕೀ ಇಚ್ಛಾ ಹೋತಿ ಹೈ ಔರ್ ಭಗವಾನ್ ತುಮ್ಹಾರೆ ಲಿಯೇ ಅಚ್ಛಾಹೀ ಸೋಚತಾ ಹೈ’ (ನಮ್ಮ ಇಚ್ಛಾನುಸಾರ ಆದರೆ ಒಳ್ಳೆಯದು. ಆಗದೇ ಇದ್ದರೆ ಇನ್ನೂ ಒಳ್ಳೆಯದು. ಏಕೆಂದರೆ ಆಗ ಅದು ದೇವರ ಇಚ್ಛೆ ಆಗಿರುತ್ತದೆ ಹಾಗೂ ದೇವರು ನಮಗಾಗಿ ಒಳ್ಳೆಯದನ್ನೇ ಮಾಡುತ್ತಾನೆ). ಸ್ವಲ್ಪ ತಾಳ್ಮೆಯಿಂದ ಇರೋಣ. ತಮ್ಮ ಪ್ರೀತಿ, ಹಾರೈಕೆ, ಪ್ರೋತ್ಸಾಹ, ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮುಂದಿನ ಯೋಜನೆಗಳ ಮೇಲೂ ಇರತ್ತದೆ ಎಂಬ ನಂಬಿಕೆ ನನಗಿದೆ. ತಮ್ಮೆಲ್ಲರನ್ನೂ ನಾನು ತುಂಬಾ ಪ್ರೀತಿಸುತ್ತೇನೆ. ಯಾವಾಗಲೂ ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’ ಎಂದು ಅನಿರುದ್ಧ್ ಅವರು ಪತ್ರ ಪೂರ್ಣಗೊಳಿಸಿದ್ದಾರೆ.