ಹೈದರಾಬಾದ್: ಆನ್ ಲೈನ್ ಆ್ಯಪ್ ನ ಬೆದರಿಕೆಯಿಂದ ಬೇಸತ್ತು ದಂಪತಿ ಪುತ್ರಿಯ ಜನ್ಮದಿನದಂದೇ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಕೊಲ್ಲಿ ದುರ್ಗಾರಾವ್ ಹಾಗೂ ಪತ್ನಿ ರಮ್ಯಾ ಲಕ್ಷ್ಮೀ ಆತ್ಮಹತ್ಯೆಗೆ ಶರಣಾದವರು.
ದುರ್ಗಾರಾವ್ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದರು. ರಮ್ಯಾ ಲಕ್ಷ್ಮೀ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಹಣಕಾಸಿನ ತೊಂದರೆಯಾಯಿತೆಂದು ದಂಪತಿ 2 ಲೋನ್ ಆ್ಯಪ್ ನಿಂದ ಸಾಲ ಪಡೆದುಕೊಂಡಿದ್ದರು. ಆದರೆ, ಸಕಾಲಕ್ಕೆ ಹಣ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ್ಯಪ್ ನವರು ಹಣ ನೀಡುವಂತೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಹಣ ಮರುಪಾವತಿ ಮಾಡದಿದ್ದರೆ, ರಮ್ಯಾ ಲಕ್ಷ್ಮೀ ಅವರ ಫೋಟೋವನ್ನು ಅಶ್ಲೀಲವಾಗಿ ಮಾರ್ಫ್(ಎಡಿಟ್) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇದರಿಂದ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಅಂಜಿದ ದಂಪತಿ ಗೋದಾವರಿ ಜಿಲ್ಲೆಯ ಮೊಗಲ್ಟೂರಿಗೆ ತೆರಳಿ ಹೊಟೇಲ್ ವೊಂದರಲ್ಲಿ ತಂಗಿ, ಸಂಬಂಧಿಕರಿಗೆ ಕರೆ ಮಾಡಿ, ತಮ್ಮ ಮಕ್ಕಳನ್ನು ನೋಡಿಕೊಳ್ಳುವಂತೆ ಮನವಿ ಮಾಡಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಲೋನ್ ಆ್ಯಪ್ ಗಳಿಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದರೂ, ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ವಿಫಲವಾಗುತ್ತಿದೆ. ಹೀಗಾಗಿ ಆ್ಯಪ್ ಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಸಾರ್ವಜನಿಕರು ಇಂತಹ ಲೋನ್ ಆ್ಯಪ್ ಗಳಿಂದ ಸಾಲ ಪಡೆಯದೇ ಇರುವುದು ಉತ್ತಮ ಎಂಬ ಮಾತುಗಳು ಕೇಳಿ ಬರುತ್ತಿವೆ.