ಮೈಸೂರು: ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ನೇರವಾಗಿ ಆರೋಪಿಸಿರುವವರ ಪಟ್ಟಿಯಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರು ಕೂಡ ಇದೆ. ಹೀಗಿದ್ದೂ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಪೊಲೀಸರು ಬಂಧಿಸಿಲ್ಲವೇಕೆ.? ಬಂಧಿಸಿ ವಿಚಾರಣೆ ನಡೆಸಿಲ್ಲವೇಕೆ ಎಂಬುದಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪ್ರತಾಪ್ ಸಿಂಹ, ಡ್ರಗ್ಸ್ ಪ್ರಕರಣ ಕುರಿತಂತೆ ಸಾಮಾಜಿಕ ಕಾರ್ಯಕರ್ಯ ಪ್ರಶಾಂತ್ ಸಂಬರಗಿ ಹಲವರ ಹೆಸರು ಹೇಳಿದ್ದಾರೆ. ಈ ಪಟ್ಟಿಯಲ್ಲಿ ಜಮೀರ್ ಅಹಮ್ಮದ್ ಹೆಸರು ಸಹ ಇದೆ. ಹೀಗಿದ್ದರೂ ಇದುವರೆಗೂ ಪೊಲೀಸರು ಜಮೀರ್ ಅಹಮ್ಮದ್ರನ್ನ ಯಾಕೆ ಬಂಧಿಸಿಲ್ಲ. ಇದರ ಹಿಂದಿನ ಉದ್ದೇಶವೇನು? ಎಂದು ಪೊಲೀಸರಿಗೆ ಪ್ರಶ್ನಿಸಿದ್ಧಾರೆ.
ತನಿಖಾಧಿಕಾರಿಗಳಿಗೆ ಪ್ರಶಾಂತ್ ಸಂಬರಗಿ ಆರೋಪಗಳ ಮೇಲೆ ಅನುಮಾನಗಳಿರಬಹುದು. ಬೇಕಾದರೆ ಪ್ರಶಾಂತ್ ಸಂಬರಗಿಯವರನ್ನು ತನಿಖೆಗೆ ಒಳಪಡಿಸಿ. ಸಂಬರಗಿ ಆರೋಪಗಳಿಗೆ ಪೂರಕವಾದ ದಾಖಲೆಗಳಿದ್ದರೆ ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.