ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮಜೂರಿನ ಸಾನದ ರಮೇಶ್ ಪೂಜಾರಿ ಅವರ ಹಸುವೊಂದು ಮುದ್ದಾದ ಮೂರು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಸಂಗತಿ ನಡೆದಿದೆ.
ಕಾಕತಾಳೀಯ ಎಂಬಂತೆ ಶ್ರೀಕೃಷ್ಣ ಜನ್ಮಾಷ್ಟಮಿಯಂದೇ ಹಸು ಮೂರು ಕರುಗಳಿಗೆ ಜನ್ಮ ನೀಡಿದೆ. ಹಸು ಮತ್ತು ಮೂರು ಕರುಗಳು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.
ಬೊಳ್ಳಿ ಹೆಸರಿನ ಹಸುವಿಗೆ ಇದು ನಾಲ್ಕನೇ ಗರ್ಭಧಾರಣೆಯಾಗಿದ್ದು ಗುರುವಾರ ನಾಲ್ಕನೇ ಬಾರಿಗೆ ಕರು ಹಾಕುವ ವೇಳೆ ಎರಡು ಗಂಡು ಮತ್ತು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ.
ಗುರುವಾರ ಬೆಳಗ್ಗೆ ಸಹಜ ರೀತಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯವರೇ ಹಸುವಿಗೆ ಕರು ಹಾಕಲು ಸಹಯೋಗ ನೀಡಿದರು. ಬಳಿಕ ಪಶು ವೈದ್ಯಾದಿಕಾರಿ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಅವರು ಆಗಮಿಸಿ ದನ ಮತ್ತು ಕರುಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಮೂರು ಕರು ಹಾಕಿದೆ ಎಂಬ ವಿಷಯ ಹರಡುತ್ತಿದ್ದಂತೆ ಅಕ್ಕಪಕ್ಕದ ಊರಿನವರು ಬಂದು ಕರುಗಳನ್ನ ನೋಡಿ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಹಸು ಒಂದೇ ಕರು ಹಾಕೋದು. ಆದರೆ, ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಬಹುದು. ಮೂರು ಕರುಗಳಿಗೆ ಜನ್ಮ ನೀಡುವುದು ತುಂಬಾ ವಿರಳ.